ತಿರುವನಂತಪುರಂ: ಕೇಂದ್ರ ಸರ್ಕಾರದ ಹೊಸ ಐಟಿ ನಿಯಮಗಳ ವಿರುದ್ಧ ನ್ಯೂಸ್ ಬ್ರಾಡ್ಕ್ಯಾಸ್ಟರ್ಸ್ ಅಸೋಸಿಯೇಷನ್(ಎನ್ಬಿಎ) ಸಲ್ಲಿಸಿರುವ ರಿಟ್ ಅರ್ಜಿಯ ಮೇಲೆ ಕೇರಳ ಹೈಕೋರ್ಟ್ ಇಂದು ಮಧ್ಯಂತರ ಆದೇಶ ಹೊರಡಿಸಿದೆ. ಹೊಸ ನಿಯಮಗಳನ್ನು ಪಾಲಿಸದಿರುವುದಕ್ಕೆ ಎನ್ಬಿಎ ಸದಸ್ಯರಾದ ಸುದ್ದಿ ಸಂಸ್ಥೆಗಳ ವಿರುದ್ಧ ಸದ್ಯಕ್ಕೆ ಯಾವುದೇ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಹೇಳಿದೆ.
ಎನ್ಬಿಎ ಸಲ್ಲಿಸಿರುವ ಅರ್ಜಿಯಲ್ಲಿ, ಕೇಂದ್ರದ ಹೊಸ ನಿಯಮಗಳು ಮಾಧ್ಯಮ ಹಕ್ಕುಗಳನ್ನು ಕಾರಣರಹಿತವಾಗಿ ನಿರ್ಬಂಧಿಸಲು ಸರ್ಕಾರಿ ಪ್ರಾಧಿಕಾರಗಳಿಗೆ ವಿಪರೀತ ಅಧಿಕಾರ ನೀಡುತ್ತದೆ ಎಂದು ಹೇಳಿದ್ದು, ಸದರಿ ನಿಯಮಗಳು ಐಟಿ ಕಾಯ್ದೆಯ ಕಾನೂನು ವ್ಯಾಪ್ತಿಗೆ ಸಲ್ಲುವುದಿಲ್ಲ ಎನ್ನಲಾಗಿದೆ. ಹಲವು ಡಿಜಿಟಲ್ ಮಾಧ್ಯಮ ಕಂಪೆನಿಗಳಿಗೆ ಹೊಸ ಐಟಿ ನಿಯಮಗಳಿಂದ ಹೈಕೋರ್ಟ್ ಈಗಾಗಲೇ ರಕ್ಷಣೆ ನೀಡಿದೆ ಎಂದು ಎನ್ಬಿಎ ಪರ ವಕೀಲರು ವಾದಿಸಿದರು.
ನ್ಯಾಯಮೂರ್ತಿ ಪಿ.ಬಿ.ಸುರೇಶ್ ಕುಮಾರ್ ಅವರು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ, ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯಗಳಿಗೆ ಈ ಅರ್ಜಿಯ ಮೇಲೆ ನೋಟೀಸು ಜಾರಿ ಮಾಡಿದ್ದಾರೆ. ಅರ್ಜಿ ನಿರ್ಣಯವಾಗುವವರೆಗೆ ಸುದ್ದಿ ಸಂಸ್ಥೆಗಳಿಗೆ ರಕ್ಷಣೆ ಒದಗಿಸಿ ಆದೇಶಿಸಿದ್ದಾರೆ.
ವಿವಿಧ ಹೈಕೋರ್ಟ್ಗಳ ಮುಂದೆ ವಿಚಾರಣೆಗೆ ಬಂದಿರುವ ಐಟಿ ನಿಯಮಗಳ ಕುರಿತಾದ ಎಲ್ಲಾ ಮೊಕದ್ದಮೆಗಳನ್ನು ಸುಪ್ರೀಂ ಕೋರ್ಟ್ಗೆ ವರ್ಗಾಯಿಸುವಂತೆ ಕೋರಿ, ಕೇಂದ್ರ ಸರ್ಕಾರ ಈಗಾಗಲೇ ಸುಪ್ರೀ ಕೋರ್ಟ್ಗೆ ವರ್ಗಾವಣೆ ಅರ್ಜಿ ಸಲ್ಲಿಸಿದೆ ಎನ್ನಲಾಗಿದೆ. (ಏಜೆನ್ಸೀಸ್)
VIDEO | ರಜನೀಕಾಂತ್ ಅನುಕರಣೆಯ ಫ್ಲಾಪ್ ಶೋ!
VIDEO | ಕ್ಯಾಪ್ಟನ್ ಕೂಲ್ ಧೋನಿ ಬರ್ತ್ಡೇಗೆ ಐಸಿಸಿ ವಿಶೇಷ ಕೊಡುಗೆ