ತಿರುವನಂತಪುರ: ಕೇರಳದಲ್ಲಿ ಕರೊನಾ ವೈರಸ್ ಸೋಂಕು ಸಮುದಾಯಕ್ಕೆ ಹರಡಿದಿದೆ ಎನ್ನುವ ಭೀತಿ ಜನರಲ್ಲಿ ವ್ಯಾಪಕವಾಗಿದೆ.
ರಾಷ್ಟ್ರದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದು ಹಾಗೂ ರಾಜ್ಯದಲ್ಲಿ 25 ಮಂದಿ ರೋಗಿಗಳ ಸೋಂಕು ಹರಡುವಿಕೆಯ ಮೂಲ ಪತ್ತೆಯಾಗದ ಹಿನ್ನೆಲೆಯಲ್ಲಿ ಜನರಲ್ಲಿ ಸೋಂಕು ಸಮುದಾಯಕ್ಕೆ ಹರಡಿದೆ ಎನ್ನುವ ಭೀತಿಗೆ ಕಾರಣವಾಗಿದೆ. ಕೇರಳದಲ್ಲಿ 4 ತಿಂಗಳ ಮಗು ಸೋಂಕಿಗೆ ಬಲಿಯಾಗಿರುವುದರಿಂದ ಸಾರ್ವಜನಿಕರು ಭಯಗೊಂಡಿದ್ದಾರೆ.
ಸಮುದಾಯಕ್ಕೆ ಸೋಂಕು ನಿರಾಕರಿಸಿದ ಸಚಿವೆ: ರಾಜ್ಯದಲ್ಲಿ ಕರೊನಾ ವೈರಸ್ ಸೋಂಕು ಸಮುದಾಯಕ್ಕೆ ಹರಡಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಕೂಡ ಗಮನ ಹರಿಸುತ್ತಿದೆ. ಸಮುದಾಯಕ್ಕೆ ಹರಡಿರುವ ಸೂಚನೆ ಇದುವರೆಗೆ ಬಂದಿಲ್ಲ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ಹೇಳಿದ್ದಾರೆ.
ಆರೋಗ್ಯ ಇಲಾಖೆ ಕೂಡ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಕರೊನಾ ಹಾಟ್ಸ್ಪಾಟ್ಗಳು ಇತರ ಭಾಗಗಳ ಮೇಲೆ ನಿಗಾ ವಹಿಸಿದ್ದೇವೆ. ಈಗಲೇ ಸೋಂಕು ಸಮುದಾಯಕ್ಕೆ ಹರಡಿದೆ ಎಂದು ಹೇಳಲು ಸಾಧ್ಯವಿಲ್ಲ ಇನ್ನಷ್ಟು ದಿನಗಳ ನಂತರ ತಿಳಿಯಲಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳದ ಕೊಲ್ಲಂ, ಕೊಟ್ಟಾಯಂ, ಇಡುಕ್ಕಿ ಮತ್ತು ಕೋಜಿಕೋಡ್ ಜಿಲ್ಲೆಗಳಲ್ಲಿ ಐದು ದಿನಗಳಲ್ಲಿ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದಾರೆ. ಇಡುಕ್ಕಿ ಜಿಲ್ಲಿಯಲ್ಲಿ ಎಲ್ಲ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಹೀಗಿದ್ದರೂ ಇಡುಕ್ಕಿಯಲ್ಲಿ ಲಾಕ್ಡೌನ್ ಸಿಡಿಲಗೊಳಿಸಿಲ್ಲ. ಹಾಟ್ಸ್ಪಾಟ್ಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)