ಬೆಂಗಳೂರು: ಇಂದು(ಡಿ.1) ವಿಧಾನಸೌಧ ನಿರ್ಮಾತೃ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಪುಣ್ಯಸ್ಮರಣೆ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧದ ಆವರಣದಲ್ಲಿರುವ ಕೆಂಗಲ್ ಹನುಮಂತಯ್ಯರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಕೆಂಗಲ್ ಹನುಮಂತಯ್ಯನವರ ತತ್ವಾದರ್ಶ ಸ್ಮರಿಸುವ ದಿನ ಇಂದು. ಮೈಸೂರು ಪ್ರಾಂತ್ಯದ ಹಿರಿಯ ನಾಯಕ ಕೆಂಗಲ್ ಹನುಮಂತಯ್ಯ. ಕರ್ನಾಟಕದ ಏಕೀಕರಣದಲ್ಲಿ ಭಾಗಿಯಾಗಿದ್ದರು. ನಾಡಿನ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿದ್ದರು. ಬೆಂಗಳೂರನ್ನು ಶಕ್ತಿ ಕೇಂದ್ರವಾಗಿಸಿ ವಿಧಾನಸೌಧ ನಿರ್ಮಾಣ ಮಾಡಿದರು. ಜನಮಾನಸದಲ್ಲಿ ಶಾಶ್ವತ ಸ್ಥಾನ ಬಿಟ್ಟು ಹೋಗಿದ್ದಾರೆ. ಕರ್ನಾಟಕದಲ್ಲಿ ರೈಲ್ವೆ ಪ್ರಗತಿಗೆ ಅವರು ಹಾಕಿ ಕೊಟ್ಟ ಯೋಜನೆಯೇ ಕಾರಣ ಎಂದು ಸಿಎಂ ಬೊಮ್ಮಾಯಿ ಸ್ಮರಿಸಿದರು. ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸಂಸದ ಮುನಿಸ್ವಾಮಿ, ಕೆಂಗಲ್ ಹನುಮಂತಯ್ಯ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.