ಕೆಂಭಾವಿ: ನಗನೂರ ಗ್ರಾಮ ಪಂಚಾಯಿತಿಯಲ್ಲಿ ೨೦೨೧-೨೨ ಮತ್ತು ೨೦೨೨-೨೩ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೆತ್ತಿಕೊಂಡ ೧೮೪ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ಕುರಿತು ಸಲ್ಲಿಸಿದ ದೂರಿನ ಮೇರೆಗೆ ಸೋಮವಾರ ತಾಲೂಕು ಮಟ್ಟದ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿತು.
ನರೇಗಾದಲ್ಲಿ ಅವ್ಯವಹಾರ ನಡೆದಿದ್ದು, ಒಂದೇ ಕಾಮಗಾರಿಯ ಎರಡು ಬಾರಿ ಬಿಲ್ ಮಾಡಿ ಸರ್ಕಾರದ ಹಣ ದುರುಪಯೋಗ ಪಡಿಸಿಕೊಂಡ ಪಿಡಿಒ ಹಾಗೂ ಅಂದಿನ ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಗನೂರ ಗ್ರಾಮದ ಶರಣು ದೇಸಾಯಿ ಜಿಪಂ ಸಿಇಒಗೆ ದೂರು ನೀಡಿದ್ದರು.
ಈ ದೂರಿನ ಮೇರೆಗೆ ಸುರಪುರ ತಾಪಂ ನರೇಗಾ ಸಹಾಯಕ ನಿರ್ದೇಶಕ ರವಿಚಂದ್ರರೆಡ್ಡಿ ನೇತೃತ್ವದ ತಂಡ ಮೊದಲಿಗೆ ಪಂಚಾಯಿತಿಗೆ ಭೇಟಿ ನೀಡಿ, ಕಾಮಗಾರಿ ನಡೆದಿರುವ ೧೮೪ ಕಡೆ ಇತರೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಯಿತು. ನಂತರ ಐದು ಜನ ಇಂಜಿನಿಯರ್ ಹಾಗೂ ತಾಂತ್ರಿಕ ಸಹಾಯಕರ ಒಳಗೊಂಡ ನಾಲ್ಕು ತಂಡ ರಚಿಸಿ ಗ್ರಾಪಂ ವ್ಯಾಪ್ತಿಯಲ್ಲಿ ಈ ಹಿಂದೆ ನರೇಗಾ ಯೋಜನೆ ಅಡಿ ನಡೆದ ಕಾಮಗಾರಿ ಪರಿಶೀಲಿಸಿದರು. ಗ್ರಾಪಂ ಅಧ್ಯಕ್ಷ ಶಿವಶರಣರೆಡ್ಡಿ ಕೆಂಚಗೋಳ ಹಾಗೂ ಗ್ರಾಮಸ್ಥರು ಇದ್ದರು.
ತಾಲೂಕು ಮಟ್ಟದ ಅಧಿಕಾರಿ ಒಳಗೊಂಡ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಎರಡು ದಿನದ ಒಳಗಾಗಿ ತಾಪಂ ಇಒ ಅವರಿಗೆ ವರದಿ ನೀಡಲಾಗುವುದು.
| ರವಿಚಂದ್ರರೆಡ್ಡಿ ಸಹಾಯಕ ನಿರ್ದೇಶಕ