ಸವಣೂರ: ಆಕ್ಸಿಜನ್ ಈ ಸಂದರ್ಭದಲ್ಲಿ ಬಂಗಾರವಾಗಿದ್ದು, ರೋಗಿಗಳ ಚಿಕಿತ್ಸೆಯ ಆಧಾರದಲ್ಲಿ ಎಷ್ಟು ಬೇಕೋ ಅಷ್ಟು ಮಾತ್ರ ಆಕ್ಸಿಜನ್ ಬಳಕೆ ಮಾಡಬೇಕು ಎಂದು ವೈದ್ಯರಿಗೆ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದರು.
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ, ಅಧಿಕಾರಿಗಳ ಸಭೆ ನಡೆಸಿದರು. ಆಸ್ಪತ್ರೆಯಲ್ಲಿ ಕೂಡಲೆ 25 ಬೆಡ್ ಹೆಚ್ಚಿಸಬೇಕು. ರೋಗಿಗಳ ಆರೈಕೆಗೆ ಹೆಚ್ಚಿನ ನಿಗಾ ವಹಿಸಬೇಕು. ರಾತ್ರಿ ವೇಳೆ ರೋಗಿಗೆ ಉಸಿರಾಟ ತೊಂದರೆಯಾದಲ್ಲಿ ವೆಂಟಿಲೇಟರ್ ಬಳಕೆ ಮಾಡಿಕೊಂಡು ಬೆಳಗ್ಗೆ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆ ಅಥವಾ ಕಿಮ್ಸ್ಗೆ ಕಳುಹಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ವಾರ್ಡ್ನಲ್ಲಿ 100 ರೋಗಿಗಳಲ್ಲಿ 6 ರೋಗಿಗಳು ಆಕ್ಸಿಜನ್ ಮೇಲಿದ್ದಾರೆ. ಆಸ್ಪತ್ರೆಯಲ್ಲಿ ಈಗಾಗಲೇ 55 ಸಿಲಿಂಡರ್ಗಳಿದ್ದು, ಮುಂದಿನ ನಾಲ್ಕು ದಿನಗಳಲ್ಲಿ ಗುಜರಾತ್ ಅಂಬುಜಾ ಸೇರಿದಂತೆ ವಿವಿಧ ದಾನಿಗಳಿಂದ 25 ಆಕ್ಸಿಜನ್ ಕಾನ್ಸನ್ಟ್ರೇಟರ್ ಸೇರಿ ಒಟ್ಟು 90 ಆಕ್ಸಿಜನ್ ಸಿಲಿಂಡರ್ ಪೂರೈಸಲಾಗುವುದು. ನಂತರ, ಆಸ್ಪತ್ರೆಯಲ್ಲಿಯೇ ವೆಂಟಿಲೇಟರ್ಗೆ ಆಕ್ಸಿಜನ್ ದೊರೆಯಲಿದೆ. ಆಸ್ಪತ್ರೆಯಲ್ಲಿ 48 ರೆಮ್ೆಸಿವಿರ್ ವ್ಯಾಕ್ಸಿನ್ ಇದ್ದು, ಪ್ರತಿದಿನ 7ರಿಂದ 8 ವ್ಯಾಕ್ಸಿನ್ ಹೋಗುತ್ತಿದೆ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ತಹಸೀಲ್ದಾರ್ ಸಿ.ಎಸ್. ಭಂಗಿ, ಟಿಎಚ್ಒ ಡಾ. ಚಂದ್ರಕಲಾ ಜೆ., ತಾಲೂಕು ಆಸ್ಪತ್ರೆ ಆರೋಗ್ಯ ಅಧಿಕಾರಿ ಡಾ. ಶಂಕರಗೌಡ ಹಿರೇಗೌಡ್ರ, ವೈದ್ಯರಾದ ಡಾ. ರಾಜಶೇಖರ ಮೂಲಿಮನಿ, ಡಾ. ಶಮಂತ್ ಶೆಟ್ಟಿ, ಸಿಡಿಪಿಒ ಅಣ್ಣಪ್ಪ ಹೆಗಡೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.