ಅಫಜಲಪುರ: ಮಳೆ ಕಮ್ಮಿ ಆಗಿದ್ದರಿಂದ ಭೀಮಾ, ಅಮರ್ಜಾ ಸೇರಿ ಜಲಮೂಲಗಳು ಬರಿದಾಗಿದ್ದು, ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದೆ. ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಪಿಡಿಒ ಮತ್ತು ಕಂದಾಯ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಶಾಸಕ ಎಂ.ವೈ. ಪಾಟೀಲ್ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಬರ ನಿರ್ವಹಣೆ ಸಭೆ ನಡೆಸಿದ ಅವರು, ಕಲಬುರಗಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಬುಧವಾರ ಕೆಡಿಪಿ ಸಭೆ ನಡೆಯಲಿದೆ. ಅಧಿಕಾರಿಗಳು ಸಮರ್ಪಕ ವರದಿ ಸಿದ್ಧಪಡಿಸಬೇಕು. ಕುಡಿವ ನೀರಿಗಾಗಿ ಯಾವುದೇ ಹಣದ ಕೊರತೆಯಿಲ್ಲ. ಗ್ರಾಮೀಣ ಜನರಿಗೆ ಕುಡಿವ ನೀರಿನ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಶಂಕರ ಮಾತನಾಡಿ, ತಾಲೂಕಿನಲ್ಲಿರುವ ೩೧೪ ಸಾರ್ವಜನಿಕ ಕೊಳವೆ ಬಾವಿಗಳಲ್ಲಿ ೨೨೪ ಚಾಲ್ತಿಯಲ್ಲಿವೆ. ದಿನೇದಿನೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ೬೫ ಶುದ್ಧ ಕುಡಿವ ನೀರಿನ ಘಟಕಗಳಿದ್ದು, ಅದರಲ್ಲಿ ೩೨ ನಿಷ್ಕ್ರಿಯವಾಗಿವೆ. ಸ್ಥಗಿತಗೊಂಡ ಆರ್ಒ ಪ್ಲಾಂಟ್ಗಳ ದುರಸ್ತಿಗೆ ಸರ್ಕಾರಕ್ಕೆ ೩೦ ಲಕ್ಷ ರೂ. ಹಾಗೂ ಕುಡಿವ ನೀರು ನಿರ್ವಹಣೆಗೆ ೧.೨ ಕೋಟಿ ಅನುದಾನ ಕೇಳಿದ್ದೇವೆ. ಆಳಂದ ತಾಲೂಕಿನ ಕೋರಳ್ಳಿ ಡ್ಯಾಮ್ನಿಂದ ನೀರು ಬಿಡಿಸಿದರೆ ಚೌಡಾಪುರ ವಲಯದ ೧೦ ಗ್ರಾಮಗಳಿಗೆ ಕುಡಿಯಲು ಮತ್ತು ಕೃಷಿಗೆ ಅನುಕೂಲವಾಗಲಿದೆ. ಹಿಂಚಗೇರಾ ಹರಿಜನ ವಾರ್ಡ್ನ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಲಾಗಿದ್ದು, ಹಳ್ಳದಲ್ಲಿ ಬೋರ್ವೆಲ್ ಕೊರೆದು ನೀರು ಪೂರೈಸಲಾಗಿದೆ ಎಂದು ತಿಳಿಸಿದರು.
ಅವರಳ್ಳಿಯಲ್ಲಿ ಕುಡಿವ ನೀರಿನ ಲಭ್ಯತೆಯಿದ್ದರೂ ಗ್ರಾಪಂನವರು ಸಿಬ್ಬಂದಿಗೆ ಸಂಬಳ ಕೊಡದ್ದರಿಂದ ಎರಡು ತಿಂಗಳಿಂದ ನೀರು ಪೂರೈಕೆ ಸ್ಥಗಿತವಾಗಿದೆ. ತಾಪಂ ಇಒ ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ಬಿಲ್ವಾಡ(ಕೆ)ದಲ್ಲೂ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಸೂಕ್ತ ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದರು.
ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್. ಗಡಗಿಮನಿ ಮಾತನಾಡಿ, ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ೧೦,೮೬೪ ರೈತರು ಬೆಳೆ ವಿಮೆ ಮಾಡಿದ್ದಾರೆ. ಈಗಾಗಲೇ ವಿಮಾ ಕಂಪನಿಯವರು ಶೇ.೨೫ ಮಧ್ಯಂತರ ಪರಿಹಾರ ನೀಡಿದ್ದಾರೆ. ಇಳುವರಿ ಆಧರಿಸಿ ಪೂರ್ಣ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.
ತಹಸೀಲ್ದಾರ್ ಸಂಜೀವಕುಮಾರ ದಾಸರ್, ಪುರಸಭೆ ಮುಖ್ಯಾಧಿಕಾರಿ ವಿಜಯ ಮಹಾಂತೇಶ ಹೂಗಾರ, ತಾಪಂ ಇಒ ಬಾಬುರಾವ ಜ್ಯೋತಿ, ಬಿಇಒ ಹಾಜಿ ಮಲಂಗ್ ಇಂಡೀಕರ್, ಭೀಮಾ ಏತ ನೀರಾವರಿ ಎಇಇ ಸಂತೋಷ ಸಜ್ಜನ್, ನರೇಗಾ ಎಡಿ ರಮೇಶ ಪಾಟೀಲ್, ಪಿಡಬ್ಲುÈಡಿಯ ಉಮೇಶ ಆಲೆಗಾಂವ್, ಜೆಸ್ಕಾಂ ಎಇಇ ನಾಗರಾಜ ಇತರರಿದ್ದರು.
ಸಿಟಿಗೆ ಎರಡು ದಿನಕ್ಕೊಮ್ಮೆ ವಾಟರ್: ಅಫಜಲಪುರದ ೨೩ ವಾರ್ಡ್ಗಳಿಗೆ ಎರಡು ದಿನಕ್ಕೊಮ್ಮೆ ನೀರು ಬಿಡುತ್ತಿದ್ದು, ಸದ್ಯ ಭೀಮಾ ನದಿಯಲ್ಲಿ ನೀರಿನ ಕೊರತೆಯಿಲ್ಲ, ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಜಾಕ್ವೆಲ್ ಹತ್ತಿರ ನದಿಗೆ ಅಡ್ಡಲಾಗಿ ಬಂಡು ನಿರ್ಮಿಸಲು ೧೫ನೇ ಹಣಕಾಸಿನಲ್ಲಿ ೧೦ ಲಕ್ಷ ರೂ. ವ್ಯಯಿಸಲಾಗುತ್ತಿದೆ. ಪಟ್ಟಣದಲ್ಲಿ ೪ ಶುದ್ಧ ಕುಡಿವ ನೀರಿನ ಘಟಕ ದುರಸ್ತಿಗಾಗಿ ೧೧.೮೦ ಲಕ್ಷ ರೂ. ಟೆಂಡರ್ ಕರೆಯಲಾಗುತ್ತಿದೆ. ಮೂರು ಖಾಸಗಿ ಐಎಸ್ಐ ಅನುಮತಿ ಪಡೆದ ಶುದ್ಧ ಕುಡಿವ ನೀರಿನ ಘಟಕಗಳಿವೆ. ಕಲಬುರಗಿ ರಸ್ತೆಯಲ್ಲಿ ಸಿಎ ನಿವೇಶನ ಗುರುತಿಸಿ ಪುರಸಭೆ ಸ್ವಂತ ಕಟ್ಟಡ ಕಟ್ಟಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮುಖ್ಯಾಧಿಕಾರಿ ವಿಜಯಮಹಾಂತೇಶ ಹೂಗಾರ ಮಾಹಿತಿ ನೀಡಿದರು.
ಮಾರ್ಚ್ವರೆಗೆ ಮೇವಿನ ಕೊರತೆ ಆಗಲ್ಲ: ಅಫಜಲಪುರ ತಾಲೂಕಿನಲ್ಲಿ ಮಾರ್ಚ್ ಅಂತ್ಯದೊಳಗೆ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದು. ಈಗಾಗಲೇ ನೀರಿನ ಲಭ್ಯವಿರುವ ರೈತರಿಗೆ ಉಚಿತ ಮೇವು ಬೀಜ ನೀಡಲಾಗಿದೆ. ಪಶು ಸಂಜೀವಿನಿ ಯೋಜನೆಯಡಿ ವಾಹನ ಲಭ್ಯವಿದ್ದು, ತುರ್ತು ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ. ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಕೆ.ಎಂ. ಕೋಟೆ ಕೋರಿದರು.
ಕ್ಷೇತ್ರದಲ್ಲಿ ಜಲಜೀವನ ಮಿಷನ್ ಕಾಮಗಾರಿ ಕಳಪೆ ಬಗ್ಗೆ ದೂರುಗಳು ಬಂದಿವೆ. ಕೆಲವೆಡೆ ಗುತ್ತಿಗೆದಾರರು ಅರ್ಧಕ್ಕೆ ಕಾಮಗಾರಿ ನಿಲ್ಲಿಸಿರುವ ಮಾಹಿತಿಯಿದೆ. ಕೂಡಲೇ ಸಂಬಂದಿತ ಅಧಿಕಾರಿಗಳು ಪರಿಶೀಲನೆ ಮಾಡಬೇಕು. ಅಸಮರ್ಪಕ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಬಿಲ್ ಕೊಡಬೇಡಿ. ಅವಶ್ಯವಿದ್ದರೆ ಮತ್ತೊಮ್ಮೆ ಟೆಂಡರ್ ಕರೆದು ಕೆಲಸ ಮುಗಿಸಿ.
| ಎಂ.ವೈ.ಪಾಟೀಲ್ ಶಾಸಕ
ಕುಡಿವ ನೀರಿಗೆ ತೊಂದರೆಯಾಗದAತೆ ತಹಸೀಲ್ದಾರ್ ಖಾತೆಯಲ್ಲಿ ೨೦ ಲಕ್ಷ ರೂ. ಅನುದಾನ ಲಭ್ಯವಿದೆ. ನೀರಿನ ಅಭಾವ ಕಂಡುಬAದರೆ ಕೊಳವೆ ಬಾವಿ ಕೊರೆಯಲು ಶಾಸಕರು ಸೂಚನೆ ನೀಡಿದ್ದಾರೆ. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಯಾವುದೇ ಸಮಸ್ಯೆ ಆಗದಂತೆ ನಿಗಾ ಇರಿಸಿದ್ದಾರೆ.
| ಸಂಜೀವಕುಮಾರ ದಾಸರ್ ತಹಸೀಲ್ದಾರ್