ಶ್ರೀನಿವಾಸಪುರ: ಜಿಲ್ಲೆಗೆ ಕೆಸಿ ವ್ಯಾಲಿ ಯೋಜನೆ ತ್ವರಿತಗತಿಯಲ್ಲಿ ಅನುಷ್ಠಾನಗೊಳ್ಳಲು ಕಾರಣರಾಗಿದ್ದ ಕೆ.ಆರ್. ರಮೇಶ್ಕುಮಾರ್ ಪ್ರತಿನಿಧಿಸುವ ತಾಲೂಕಿನ ಆಲವಾಟ ಕೆರೆಗೆ ಸೋಮವಾರ ನೀರು ಹರಿದಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ 126 ಕೆರೆಗಳಿಗೆ ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಿಸಿ ಹಸಿರುವ ಕೆಸಿ ವ್ಯಾಲಿ ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮೇಶ್ಕುಮಾರ್ ಕಾರಣರಾಗಿದ್ದರು. ಕಳೆದ ವಿಧಾನಸಭೆ ಚುನಾವಣೆ ಅಸವಧಿಯಲ್ಲೇ ಶ್ರೀನಿವಾಸಪುರ ತಾಲೂಕಿಗೆ ಕೆಸಿ ವ್ಯಾಲಿ ನೀರು ಹರಿಸುವ ಕನಸು ಕಂಡಿತ್ತಾದರೂ ಯೋಜನೆಗೆ ಕಾನೂನು ತೊಡಕು ಎದುರಾಗಿದ್ದರಿಂದ ಸಾಧ್ಯವಾಗಲಿಲ್ಲ.
ಪ್ರಸ್ತುತ ಕೆಸಿ ವ್ಯಾಲಿ ನೀರು ಕೋಲಾರದ ಲಕ್ಷ್ಮೀಸಾಗರ ಕೆರೆ ತುಂಬಿ ಸುತ್ತಮುತ್ತಲ ಕೆರೆಗಳಿಗೆ ಹರಿದತ್ತಾದರೂ ಜನ್ನಘಟ್ಟ ಕೆರೆಗೆ ನೀರು ಹರಿದು ಅಲ್ಲಿಂದ ಪಂಪ್ ಮಾಡದ ಹೊರತು ಶ್ರೀನಿವಾಸಪುರ ತಾಲೂಕಿಗೆ ನೀರು ಹರಿಯುವ ಸಾಧ್ಯತೆ ಇರಲಿಲ್ಲ. ತಾಲೂಕಿಗೆ ನೀರು ಹರಿಯುವುದು ವಿಳಂಬವಾಗಿರುವ ಬಗ್ಗೆ ರಾಜಕೀಯ ವಿರೋಧಿಗಳು ನಿರಂತರ ಟೀಕೆ ಮಾಡುತ್ತಾ ಬಂದಿದ್ದರು.
ಈ ಮಧ್ಯೆ ನೀರು ಹರಿಯುವ ಹತ್ತಾರು ಹಳ್ಳಿಗಳಲ್ಲಿ ಕಾಲುವೆಯಿಂದ ನೀರುಕಳ್ಳರು ಹೆಚ್ಚಿದ್ದು, ಕೆರೆ ತುಂಬಲು ಅಡ್ಡಿಯಾಗಿತ್ತು. ಈ ಸಮಸ್ಯೆ ನಿವಾರಿಸಲು ಮುಂದಾದ ರಮೇಶ್ಕುಮಾರ್ ಬಿಡಬ್ಲ್ಯು ಎಸ್ಎಸ್ಬಿ, ಸಣ್ಣನೀರಾವರಿ ಇಲಾಖೆ, ನೀರಾವರಿ ಸಚಿವರು, ಜಿಲ್ಲಾಡಳಿತದ ಜತೆ ನಿರಂತರ ಸಭೆ ನಡೆಸಿ ನೀರುಗಳ್ಳರಿಗೆ ಅಂಕುಶ ಹಾಕಿದ್ದಲ್ಲದೆ ಮಾರ್ಗ ಮಧ್ಯದ ಚೆಕ್ಡ್ಯಾಂಕ್ ಮೇಲ್ಭಾಗದ ಎತ್ತರ ತಗ್ಗಿಸಿ ನೀರು ಹರಿಯುವ ವ್ಯವಸ್ಥೆ ಮಾಡಿದ್ದಲ್ಲದೆ ಕೆರೆಯನ್ನು ಶೇ.50 ತುಂಬಿಸಿ ಮುಂದಿನ ಕೆರೆಗೆ ನೀರು ಹರಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಪರಿಣಾಮ ಜನ್ನಘಟ್ಟ ಕೆರೆಗೆ ಎರಡ್ಮೂರು ವಾರದಲ್ಲಿ ನಿಗದಿತ ಪ್ರಮಾಣದ ನೀರು ಹರಿದ ಪರಿಣಾಮ ಸೋಮವಾರ ಶ್ರೀನಿವಾಸಪುರ ತಾಲೂಕಿನ ಆಲವಾಟ ಕೆರೆಗೆ ಹರಿದಿದೆ. ಆಲವಾಟ ಹಾಗೂ ಸುತ್ತಮುತ್ತಲ ಗ್ರಾಮದ ನೂರಾರು ಮಂದಿ ನೀರು ಹರಿಯುತ್ತಿರುವುದನ್ನು ಕಣ್ತುಂಬಿಕೊಂಡರು.