ಹುಬ್ಬಳ್ಳಿ : ನೂರು ವರ್ಷಗಳ ಹಿಂದೆಯೇ ಎಲ್ಲರಿಗೂ ಶಿಕ್ಷಣ ಪ್ರಾಪ್ತವಾಗಬೇಕೆಂಬ ಬದ್ಧತೆಯಲ್ಲಿ ಅವಿಶ್ರಾಂತವಾಗಿ ಶ್ರಮಿಸಿರುವ ಸಮಷ್ಟಿ ಪ್ರಜ್ಞೆಯ ಶ್ರೇಷ್ಠ ಶಿಕ್ಷಣ ಸಂತ ಡಾ. ಎಚ್. ಎಫ್. ಕಟ್ಟಿಮನಿ ಎಂದು ಡೆಪ್ಯೂಟಿ ಚೆನ್ನಬಸಪ್ಪ ಕನ್ನಡ ವಿಕಾಸ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಡಾ. ಗುರುಮೂರ್ತಿ ಯರಗಂಬಳಿಮಠ ಪ್ರತಿಪಾದಿಸಿದರು.
ನಗರದ ಎಚ್.ಎಫ್. ಕಟ್ಟಿಮನಿ ಕನ್ನಡ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಜಂಟಿ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಎಚ್.ಎಫ್. ಕಟ್ಟಿಮನಿ ಅವರ 137ನೇ ಜಯಂತಿ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿದ್ಯಾ ವಿಕಾಸದ ನಿರ್ದಿಷ್ಟ ಯೋಜನೆ-ಯೋಚನೆಯನ್ನು ಡಾ. ಕಟ್ಟಿಮನಿ ಹೊಂದಿದ್ದರು. ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ಸುತ್ತಿ, ಹೆಚ್ಚೆಚ್ಚು ಶಾಲಾ-ಕಾಲೇಜು ಹಾಗೂ ವಾಚನಾಲಯ ತೆರೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಶಾಲಾ ಆಡಳಿತ ಮಂಡಳಿಯ ಸದಸ್ಯ ಜಿ.ಐ. ಬಿಜಾಪೂರ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಮತ್ತೊಬ್ಬ ಸದಸ್ಯ ಎಂ.ಬಿ. ಕರಡಿ, ಜೆ.ಜಿ. ಶಿಕ್ಷಕರ ತರಬೇತಿ ಕಾಲೇಜು ಪ್ರಾಚಾರ್ಯ ಬಿ.ಬಿ. ನಾಯಕ ಹಾಗೂ ಡಾ. ಕಟ್ಟಿಮನಿ ಅವರ ಮೊಮ್ಮಗ ಚೆನ್ನವೀರಸ್ವಾಮಿ ಅಲ್ಲಯ್ಯನವರಮಠ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳಾದ ಜೀವನ ಕನವಳ್ಳಿ, ಪ್ರಿಯಾ ತುರಿಹಾಳ ಹಾಗೂ ಪ್ರೌಢ ಶಾಲಾ ಮುಖ್ಯಾಧ್ಯಾಪಕಿ ಎಲ್.ಜಿ. ಗಾಣಿಗೇರ ಮಾತನಾಡಿದರು. ಗಂಗಮ್ಮ ವಸ್ತ್ರದ, ಸುಜಾತಾ ಸವದತ್ತಿ ಇತರರು ಇದ್ದರು. ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯಾಧ್ಯಾಪಕ ಆರ್.ಆರ್. ಶಿರೂರ ಸ್ವಾಗತಿಸಿದರು. ಶಶಿಕಲಾ ಬರದ್ವಾಡ ನಿರೂಪಿಸಿದರು. ಶಶಿಕಲಾ ದಳವಾಯಿ ವಂದಿಸಿದರು.
¬¬¬¬¬¬¬¬¬¬¬¬¬¬¬¬¬¬¬¬¬¬¬¬¬¬¬¬¬¬