ಲಿಂಗಸುಗೂರು: ಕಸಬಾಲಿಂಗಸುಗೂರು ಗ್ರಾಮದ ರೈತರೊಬ್ಬರ ತೋಟದಲ್ಲಿ ಆಕಸ್ಮಿಕ ಬೆಂಕಿಯಿಂದ ತೋಟದಲ್ಲಿ ಬೆಳೆದಿದ್ದ ನಾನಾ ಹಣ್ಣು ಮತ್ತು ಸಾಗವಾನಿ ಗಿಡಗಳು ಗುರುವಾರ ಸಂಜೆ ಬೆಂಕಿಗೆ ಆಹುತಿಯಾಗಿವೆ.
ಗ್ರಾಮದ ಚಂದ್ರಶೇಖರ ಭೋವಿ ಎಂಬುವರ 5 ಎಕರೆ ತೋಟದಲ್ಲಿ ಆಕಸ್ಮಿಕ ಬೆಂಕಿಯಿಂದ ಹೂ ಬಿಡುತ್ತಿದ್ದ 30 ಮಾವಿನ ಗಿಡ, 5 ಸಪೋಟ, ಸಮೃದ್ಧವಾಗಿ ಬೆಳೆದಿದ್ದ 10 ಸಾಗವಾನಿ ಗಿಡಗಳು ಮತ್ತು 40 ಸ್ಪಿಂಕ್ಲರ್ ಪೈಪ್ಗಳು ಹಾಗೂ ಇತರೆ ಕೃಷಿ ಸಾಗುವಳಿ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ್ದ ಗಿಡಗಳಿಗೆ ನೀರುಣಿಸುವ ತುಂತುರು ಹನಿ ನೀರಾವರಿಯ 40 ಪೈಪುಗಳು ಆಕಸ್ಮಿಕ ಬೆಂಕಿಗೆ ಆಹುತಿಯಾಗಿ ರೈತನು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಕಳೆದ 5 ವರ್ಷಗಳಿಂದ ತೋಟಗಾರಿಕೆ ಕೃಷಿಗಾಗಿ ಸಾಲ ಮಾಡಿ ಮಾವು, ಸಾಗವಾನಿ, ತೆಂಗು, ಸಪೋಟ ಬೆಳೆಯಲಾಗಿದೆ. ಈ ವರ್ಷ ಬೆಳೆ ಬರುತ್ತದೆಂಬ ನಿರೀಕ್ಷೆ ಇತ್ತು. ಆಕಸ್ಮಿಕ ಬೆಂಕಿಗೆ ಗಿಡಗಳು ಆಹುತಿಯಾಗಿ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಸರ್ಕಾರ ನಷ್ಟಕ್ಕೀಡಾದ ಬೆಳೆಗಳಿಗೆ ಪರಿಹಾರ ಒದಗಿಸಿ ನೆರವಿಗೆ ಧಾವಿಸಬೇಕು.
| ರೈತ ಚಂದ್ರಶೇಖರ ಭೋವಿ, ಕಸಬಾಲಿಂಗಸುಗೂರು