ಅಹಮದಾಬಾದ್: ನಾಯಕ ಮಯಾಂಕ್ ಅಗರ್ವಾಲ್ (109 ರನ್, 124 ಎಸೆತ, 17 ಬೌಂಡರಿ, 1 ಸಿಕ್ಸರ್) ಆಕರ್ಷಕ ಶತಕದ ನೆರವಿನಿಂದ ಪ್ರವಾಸಿ ಕರ್ನಾಟಕ ತಂಡ ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಟೂರ್ನಿಯಲ್ಲಿ ಆತಿಥೇಯ ಗುಜರಾತ್ ಎದುರು ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿದೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ “ಸಿ’ ಗುಂಪಿನ ಪಂದ್ಯದ ಎರಡನೇ ದಿನವಾದ ಶನಿವಾರ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡ ದಿನದಂತ್ಯಕ್ಕೆ 90 ಓವರ್ಗಳಲ್ಲಿ 5 ವಿಕೆಟ್ಗೆ 328 ರನ್ಗಳಿಸಿದ್ದು, ಸದ್ಯ 64 ರನ್ಗಳ ಮುನ್ನಡೆ ಸಾಧಿಸಿದೆ. ಅನುಭವಿ ಬ್ಯಾಟರ್ ಮನೀಷ್ ಪಾಂಡೆ (56* ರನ್, 97 ಎಸೆತ, 4 ಬೌಂಡರಿ, 2 ಸಿಕ್ಸರ್) ಜತೆಯಾಗಿ ಸುಜಯ್ ಸಾತೇರಿ (24*)ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಪಂದ್ಯದ ಮೊದಲ ದಿನ ಗುಜರಾತ್ ಮೊದಲ ಇನಿಂಗ್ಸ್ನಲ್ಲಿ 264 ರನ್ಗಳಿಗೆ ಆಲೌಟ್ ಆಗಿತ್ತು.
ಕರ್ನಾಟಕ: 5 ವಿಕೆಟ್ಗೆ 328 (ಮಯಾಂಕ್ 109, ಸಮರ್ಥ್ 60, ಪಡಿಕಲ್ 42, ನಿಕಿನ್ 22, ಮನೀಷ್ 56*, ಶುಭಾಂಗ್ 11, ಸುಜಯ್ 24*, ಚಿಂತನ್ ಗಜ 43ಕ್ಕೆ 2, ವಘೇಲಾ 90ಕ್ಕೆ 1).
ನಾಯಕನಿಗೆ ಸಮರ್ಥ್ ಸಾಥ್
ದಿನದ ಆಟ ಆರಂಭಿಸಿದ ನಾಯಕ ಮಯಾಂಕ್ ಅಗರ್ವಾಲ್ ಹಾಗೂ ಆರ್.ಸಮರ್ಥ್ (60 ರನ್, 108 ಎಸೆತ, 7 ಬೌಂಡರಿ) ಜೋಡಿ ಕರ್ನಾಟಕಕ್ಕೆ ಭದ್ರ ಅಡಿಪಾಯ ಒದಗಿಸಿತು. ಈ ಜೋಡಿ ಮೊದಲ ವಿಕೆಟ್ಗೆ 172 ರನ್ ಕಲೆಹಾಕಿತು ಗುಜರಾತ್ ಬೌಲರ್ಗಳನ್ನು ದಂಡಿಸಿದ ಇವರಿಬ್ಬರು ಭೋಜನಾ ವಿರಾಮದವರೆಗೂ ಸರಾಗವಾಗಿ ಬ್ಯಾಟಿಂಗ್ ನಡೆಸಿದರು. ಕಳೆದ ಪಂದ್ಯ ಎರಡೂ ಇನಿಂಗ್ಸ್ಗಳಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಮಯಾಂಕ್ ಭರ್ಜರಿ ಕಂಬ್ಯಾಕ್ ಮಾಡಿದರು. ಮಯಾಂಕ್ಗೆ ಉತ್ತಮ ಬೆಂಬಲ ಒದಗಿಸಿದ ಆರ್. ಸಮರ್ಥ್ ಅರ್ಧಶತಕ ಪೂರೈಸಿದರು. ಅಮೋ ಬ್ಯಾಟಿಂಗ್ ನಡೆಸುತ್ತಿದ್ದ ಇವರಿಬ್ಬರು ಚಹಾ ವಿರಾಮಕ್ಕೂ ವಿಕೆಟ್ ಕಾಯ್ದುಕೊಂಡರು. ಬಳಿಕ ಐದು ಎಸೆತಗಳ ಅಂತರದಲ್ಲಿ ವಿಕೆಟ್ ಕೈಚೆಲ್ಲಿದರು.