ಸಿಂದಗಿ: ಕರ್ನಾಟಕ ರಾಜ್ಯ ಹಾಗೂ ಪ್ರಾಂತ ರೈತ ಸಂಘ ಮತ್ತು ತಾಲೂಕು ಮಾಜಿ ಸೈನಿಕರ ಸಂಘಗಳು ಬುಧವಾರ ಎಪಿಎಂಸಿ ತಿದ್ದುಪಡಿ ರದ್ದುಪಡಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪ್ರಮುಖ ಸಂಘಟನೆಕಾರ ಅಣ್ಣಾರಾಯ ಈಳಗೇರ ಮಾತನಾಡಿ, ಸರ್ಕಾರ ರೈತರ ಹಿತ ಕಾಪಾಡುತ್ತಿಲ್ಲ. ಎಪಿಎಂಸಿ ತಿದ್ದುಪಡಿ ಮೂಲಕ ರೈತರ ಬೆಳೆ ನಷ್ಟಕ್ಕೆ ಕಾರಣವಾಗುತ್ತಿದೆ. ಅಲ್ಲದೆ, ಈ ಕಾನೂನು ತಿದ್ದುಪಡಿಯಿಂದ ವಿದೇಶಿ ಕಂಪನಿಗಳಿಂದ ವಂಚನೆಗೊಳಗಾಗುವಂತೆ ಮಾಡಿರುವುದಾಗಿ ಆರೋಪಿಸಿದರು.
ಈಗಲೇ ಲಾಕ್ಡೌನ್ ಹಿನ್ನೆಲೆ ರಾಜ್ಯದ ರೈತರ ಬೆಳೆಗಳಿಗೆ ಮಾರುಕಟ್ಟೆ ಇಲ್ಲದೇ ಬಹಳಷ್ಟು ನಷ್ಟ ಅನುಭವಿಸಿದ್ದಾರೆ. ಎಷ್ಟೋ ರೈತರ ಉತ್ಪನ್ನಗಳು ಬೆಳೆದ ಮಣ್ಣಲ್ಲೇ ಮಣ್ಣಾಗಿರುವುದನ್ನು ಕಂಡರೂ ಸರ್ಕಾರ ತನ್ನ ನಿರ್ದಯಿತನ ತೋರುತ್ತಿದೆ. ಅಲ್ಲದೆ, ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿದೆ. ಬಡ್ಡಿ ರಹಿತ ಸಾಲ ನೀಡಲು ಸಹ ಮುಂದಾಗುತ್ತಿಲ್ಲ. ಜತೆಗೆ ಕಬ್ಬಿನ ಬಾಕಿ ಹಣವನ್ನು ಕಾರ್ಖಾನೆಗಳು ಇನ್ನೂ ನೀಡಿಲ್ಲ. ಈ ಬಗ್ಗೆ ಸರ್ಕಾರ ಆಲೋಚಿಸದೆ ಇಡಿ ರೈತ ಸಮುದಾಯದ ಕಣ್ಣೀರು ಹಾಕುವಂತಹ ಸ್ಥಿತಿಗೆ ತಂದಿರುವುದಾಗಿ ಅವರು ಖಂಡಿಸಿದರು.
ಸಂಪರ್ಕ ರಸ್ತೆ ಪೂರ್ತಿಗೊಳಿಸಿ
ತಾಲೂಕಿನ ಮೋರಟಗಿ ಗ್ರಾಮದ ಜನತಾ ಕಾಲನಿಗೆ ಹೋಗುವ ರಸ್ತೆ ಕಾಮಗಾರಿಯನ್ನು ಪೂತಿಗೊಳಿಸುವುದು ಹಾಗು ಉದ್ಯೋಗ ಖಾತ್ರಿಯಡಿ ಕಾಮಗಾರಿಗಳನ್ನು ಆರಂಭಿಸುವಂತೆ ಪ್ರತ್ಯೇಕ ಮನವಿ ಸಲ್ಲಿಸಿದರು.
ಜನತಾ ಕಾಲನಿಗೆ ಗ್ರಾಮದ ಪೊಲೀಸ್ ಹೊರ ಠಾಣೆ ರಸ್ತೆ ಮಾರ್ಗವಾಗಿ ಜನಸಂಚಾರವಿದ್ದು, ಈ ರಸ್ತೆಗೆ ಸಿಸಿ ಭಾಗ್ಯ ಸಿಕ್ಕಿದೆ. ಆದರೆ, ಇದೀಗ ಅದು ಅರ್ಧಕ್ಕೆ ನಿಂತಿದ್ದು, ಕೂಡಲೇ ರಸ್ತೆ ಕಾಮಗಾರಿ ಪೂರ್ತಿಗೊಳಿಸುವಂತೆ ಒತ್ತಾಯಿಸಿದರು.
ಗ್ರಾಮ ಸೇರಲು ರಸ್ತೆ ಮಾಡಿ
ತಾಲೂಕಿನ ಇಲಾರಹಳ್ಳಿ ಗ್ರಾಮಕ್ಕೆ ಆಸಂಗಿಹಾಳ ಮಾರ್ಗವಾಗಿ ಸಂಚರಿಸಲು ಸೂಕ್ತ ರಸ್ತೆ ನಿರ್ಮಿಸುವಂತೆ ಮಾಜಿ ಸೈನಿಕರ ಸಂಘ ಪ್ರತ್ಯೇಕ ಮನವಿ ಮೂಲಕ ತಾಲೂಕಾಡಳಿತಕ್ಕೆ ಆಗ್ರಹಿಸಿದರು. ಆಸಂಗಿಹಾಳ ಮಾರ್ಗವಾಗಿ ಇಲಾರಹಳ್ಳಿಗೆ ಸೂಕ್ತ ರಸ್ತೆಯಿಲ್ಲದ್ದರಿಂದಾಗಿ ಹಲವಾರು ಜನರು ಆಸಂಗಿಹಾಳದಲ್ಲಿ ವಾಸಿಸುತ್ತಿದ್ದರು. ಇದೀಗ ಮತ್ತೆ ಇಲಾರಹಳ್ಳಿಗೆ ಬಂದು ವಸತಿ ಮಾಡಿಕೊಂಡಿದ್ದು, ಕೂಡಲೇ ಸರ್ಕಾರ ಮತ್ತು ತಾಲೂಕಾಡಳಿತ ದಾರಿ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಮಾಜಿ ಸೈನಿಕ ಶಬ್ಬೀರಪಟೇಲ ಬಿರಾದಾರ, ರವೀಂದ್ರ ಬಿರಾದಾರ, ರೈತ ಮುಖಂಡರಾದ ಶಿವಲಿಂಗಪ್ಪಗೌಡ ಬಿರಾದಾರ, ಶ್ರೀಶೈಲಗೌಡ ಪಾಟೀಲ, ಅರುಣ ಸಿಂಗೆ, ಪಿ.ಸಿ. ಕುಂಬಾರ, ಶ್ರೀಮಂತ ಪವಾರ, ಎಸ್. ಎಸ್. ಬಂಡಿವಡ್ಡರ, ಕೆ.ಎಸ್. ಸಿನ್ನೂರ, ಅನ್ವರಹುಸೇನ ಮುಲ್ಲಾ, ಎಸ್.ಡಿ. ದೇವೂರ ಮತ್ತಿತರರಿದ್ದರು.