ಬೆಂಗಳೂರು: ಎಲ್ಲವೂ ಸರಿಯಾಗಿದ್ದ ಇಷ್ಟೊತ್ತಿಗಾಗಲೇ ಪಿಯುಸಿ ಫಲಿತಾಂಶವೂ ಬಂದುಬಿಡಬೇಕಿತ್ತು. ಆದರೆ ಕರೊನಾ ವೈರಸ್ ಒಂದೇ ಒಂದು ಪರೀಕ್ಷೆಯನ್ನು ಮುಂದಕ್ಕೆ ಹಾಕುವಂತೆ ಮಾಡಿತು.
ಕಳೆದ ಮಾರ್ಚ್ ತಿಂಗಳಿನಲ್ಲಿ ಇಂಗ್ಲಿಷ್ ವಿಷಯ ಬಿಟ್ಟು ಕರ್ನಾಟಕದಲ್ಲಿ ಪಿಯುಸಿಯ ಉಳಿದೆಲ್ಲ ವಿಷಯಗಳ ಪರೀಕ್ಷೆಗಳು ನಡೆದಿದ್ದವು. ನಂತರ ಇಂಗ್ಲಿಷ್ ವಿಷಯದ ಪರೀಕ್ಷೆಯ ಅವಧಿಯಲ್ಲಿಯೇ ಕರೊನಾ ತನ್ನ ಅಟ್ಟಹಾಸ ಮೆರೆಯಲು ಶುರು ಮಾಡಿದ್ದರಿಂದ ಅದನ್ನು ಮುಂದೂಡಲಾಯಿತು.
ಇದನ್ನೂ ಓದಿ: ಆಹಾ! ರುಚಿ ರುಚಿ ಮಾಸ್ಕ್ ಪರೋಟಾ… ಸವಿಯಬೇಕಿದ್ದರೆ ಇಲ್ಲಿಗೆ ಬನ್ನಿ…
ಅಂತೂ ಜೂನ್ 18ಕ್ಕೆ ಇಂಗ್ಲಿಷ್ ಪರೀಕ್ಷೆಯೂ ಮುಗಿದಿದೆ. ಈ ಪರೀಕ್ಷೆಗೆ 1016 ಕೇಂದ್ರಗಳಲ್ಲಿ 5,95,000 ವಿದ್ಯಾರ್ಥಿಗಳು ಹಾಜರಾಗಿದ್ದರೆ ಕೆಲವರು ವೈರಸ್ ಭೀತಿಯಿಂದಲೋ ಅಥವಾ ಇನ್ನಾವುದೋ ಕಾರಣಗಳಿಂದ ಹಾಜರಾಗಿಲ್ಲ.
ಇದೀಗ ಎಲ್ಲ ಪರೀಕ್ಷೆ ಮುಗಿಸಿರುವ ವಿದ್ಯಾರ್ಥಿಗಳಿಗೆ ಫಲಿತಾಂಶದ ಚಿಂತೆ. ಇದೇ ಕಾರಣಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ಪದೇ ಪದೇ ಕರೆ ಮಾಡಿ ರಿಸಲ್ಟ್ ಯಾವಾಗ ಸರ್ ಎಂದು ಕೇಳುತ್ತಿದ್ದಾರಂತೆ. ಫಲಿತಾಂಶ ಜುಲೈ ಮೊದಲ ವಾರದಲ್ಲಿಯೇ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಈ ಹಿಂದೆ ಸುದ್ದಿಯಾಗಿದ್ದರಿಂದ ಮಕ್ಕಳೆಲ್ಲಾ ತಮಗೆ ಕರೆ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.
ಆದಕ್ಕಾಗಿ ಸಚಿವರು ಫಲಿತಾಂಶದ ಬಗ್ಗೆ ಸ್ಪಷ್ಟಪಡಿಸಿದ್ದು, ‘ಈ ಹಿಂದೆಯೂ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ, ದ್ವಿತೀಯ ಪಿಯುಸಿಯ ಫಲಿತಾಂಶವು ಜುಲೈ 20ರ ಸುಮಾರಿಗೆ ಬರಲಿದೆ‘ ಎಂದು ಹೇಳಿದ್ದಾರೆ. ಫಲಿತಾಂಶದ ಬಗ್ಗೆ ವಿದ್ಯಾರ್ಥಿಗಳು ಬಹಳ ಉತ್ಸುಕರಾಗಿದ್ದು, ಪದೇ ಪದೇ ಕರೆ ಮಾಡುತ್ತಿರುವ ಕಾರಣ, ಈ ವಿಷಯವನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.