ಬೆಂಗಳೂರು: ಬೆಂಗಳೂರಿನ ಜನರು ತೀವ್ರ ನೀರಿನ ಕೊರತೆ ಎದುರಿಸುತ್ತಿದ್ದಾರೆ. ಅನೇಕ ಬಹುಮಹಡಿ ಅಪಾರ್ಟ್ಮೆಂಟ್ಗಳಲ್ಲಿ ನೀರಿನ ಬಳಕೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳನ್ನು ಹೇರಲಾಗಿದೆ. ಇದರಿಂದಾಗಿ ಜನರು ವಾಶ್ ರೂಂನಲ್ಲಿಯೂ ನೀರಿನ ಕೊರತೆಯನ್ನು ಎದುರಿಸುತ್ತಿದ್ದಾರೆ. ಇನ್ನು ಕೆಲವರು ಪಾತ್ರೆ ಮತ್ತು ಬಟ್ಟೆ ತೊಳೆಯುವುದಕ್ಕೂ ಪರದಾಡುತ್ತಿದ್ದಾರೆ. ಇದೀಗ ಬೆಂಗಳೂರಿನ ಹರಳೂರು ಪ್ರದೇಶದಲ್ಲಿ ವಾಸವಾಗಿರುವ ವ್ಯಕ್ತಿಯೊಬ್ಬರು ‘ಎಕ್ಸ್’ನಲ್ಲಿ ತಮ್ಮ ಸಂಕಷ್ಟವನ್ನು ಹಂಚಿಕೊಂಡಿದ್ದಾರೆ.
ಎಕ್ಸ್ನಲ್ಲಿ ಹಂಚಿಕೊಂಡಿರುವ ಪೋಸ್ಟ್ನಲ್ಲಿ ಆ ವ್ಯಕ್ತಿ ಬೆಂಗಳೂರು ನಗರದಲ್ಲಿ ಫ್ಲಾಟ್ ಖರೀದಿಸಲು ಯೋಜಿಸುತ್ತಿದ್ದೆ. ಆದರೆ ಈಗ ನೀರಿನ ಬಿಕ್ಕಟ್ಟಿನ ದೃಷ್ಟಿಯಿಂದ ತನ್ನ ಯೋಜನೆಯನ್ನು ಬದಲಾಯಿಸಿದ್ದೇನೆ ಎಂದು ಹೇಳಿದ್ದಾರೆ. “ಸಿಟಿಜನ್ ಮೂವ್ಮೆಂಟ್, ಈಸ್ಟ್ ಬೆಂಗಳೂರು” ಹೆಸರಿನ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದ್ದು, ನೀರಿನ ಬಿಕ್ಕಟ್ಟನ್ನು ಎದುರಿಸಿದ ವ್ಯಕ್ತಿಯ ಕಥೆಯನ್ನು ಹಂಚಿಕೊಳ್ಳಲಾಗಿದೆ. ಆ ನಂತರ ತನ್ನ ಫ್ಲಾಟ್ ಖರೀದಿಸುವ ಯೋಜನೆಯನ್ನು ಬದಲಾಯಿಸಲಾಗಿದೆ ಎಂದು ಹೇಳಲಾಗಿದೆ.
#BengaluruWaterCrisis
One of our volunteers received a desperate phone call from someone staying in a high-rise in the Harlur area. The following is an excerpt: “I have never been in such a situation in my life. I didn't go to the toilet today because there is no water in my…— Citizens Movement, East Bengaluru (@east_bengaluru) March 10, 2024
ವ್ಯಕ್ತಿ ಹೇಳಿದ್ದೇನು?
“ನನ್ನ ಜೀವನದಲ್ಲಿ ನಾನು ಇಂತಹ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ ಎಂದು ಆ ವ್ಯಕ್ತಿ ತನ್ನ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಶೌಚಾಲಯದಲ್ಲಿಯೂ ನೀರಿಲ್ಲ. 2 ಬಿಎಚ್ಕೆಗೆ 40 ಸಾವಿರಕ್ಕೂ ಹೆಚ್ಚು ಬಾಡಿಗೆ ನೀಡುತ್ತಿದ್ದೇನೆ. ಆದರೆ ನನಗೆ ನೀರು ಕೂಡ ಸಿಗುತ್ತಿಲ್ಲ. ಬೆಳಗ್ಗೆ ನೀರು ಬಂದು 30 ನಿಮಿಷವಾಗಿದ್ದರೂ ಮಲಗಿದ್ದ ಕಾರಣ ನೀರು ಸಂಗ್ರಹಿಸಲು ಸಾಧ್ಯವಾಗಲಿಲ್ಲ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದರಿಂದ ಬೇಗ ಏಳಲು ಆಗುತ್ತಿಲ್ಲ.
ಈ ಹಿಂದೆ ನಾನು ಆಸ್ತಿಯನ್ನು ಖರೀದಿಸಲು ಯೋಜಿಸಿದ್ದೆ, ಆದರೆ ಈಗ ಇಂತಹ ಪರಿಸ್ಥಿತಿಯನ್ನು ಎದುರಿಸಿದ ನಂತರ ನನ್ನ ಯೋಜನೆಯನ್ನು ಬದಲಾಯಿಸಿದ್ದೇನೆ” ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾರೆ. ನೀರಿಲ್ಲದೆ ಈ ಸ್ಥಳದಲ್ಲಿ ವಾಸಿಸುವುದಕ್ಕಿಂತ ನನ್ನ ಹಳ್ಳಿಯಲ್ಲಿ ವಾಸಿಸುವುದು ಉತ್ತಮ ಎಂದಿರುವ ವ್ಯಕ್ತಿ ಈಗ ದೆಹಲಿ-ಎನ್ಸಿಆರ್ಗೆ ಸ್ಥಳಾಂತರಗೊಳ್ಳಲು ನಿರ್ಧರಿಸಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಶಿಫ್ಟ್ ಆಗುವುದಾಗಿ ಮತ್ತೆ ಆ ಪೋಸ್ಟ್ ಅನ್ನು ಅಪ್ಡೇಟ್ ಮಾಡಲಾಗಿದೆ.
ಮಳೆ ಕೊರತೆಯಿಂದ ಬರ ಎದುರಿಸುತ್ತಿದೆ ಕರ್ನಾಟಕ
ಈ ವರ್ಷ ಇಡೀ ಕರ್ನಾಟಕ ಮಳೆ ಕೊರತೆಯಿಂದ ಭೀಕರ ಬರ ಎದುರಿಸುತ್ತಿದೆ. ಬೆಂಗಳೂರು ನೀರಿನ ಸಮಸ್ಯೆಯಿಂದ ತೀವ್ರ ತೊಂದರೆಗೀಡಾಗಿದೆ. ನಗರದಲ್ಲಿನ ಬಹುತೇಕ ಬೋರ್ವೆಲ್ಗಳು ಬತ್ತಿ ಹೋಗುತ್ತಿದ್ದು, ಹಲವು ಕುಟುಂಬಗಳು ಸಂಪೂರ್ಣವಾಗಿ ನೀರಿನ ಟ್ಯಾಂಕರ್ಗಳನ್ನೇ ಅವಲಂಬಿಸಿವೆ.
ಏತನ್ಮಧ್ಯೆ, ಅನೇಕ ಕಂಪನಿಗಳ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ಕಡ್ಡಾಯಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ನೀರಿನ ಬಿಕ್ಕಟ್ಟಿನೊಂದಿಗೆ ಹೋರಾಡುವ ಬದಲು, ಅವರು ಮನೆಗೆ (ಗ್ರಾಮ) ಹಿಂತಿರುಗಲು ಮತ್ತು ಮನೆಯಿಂದಲೇ ಕೆಲಸ ಮಾಡಲು ಬಯಸುತ್ತಾರೆ ಎಂದು ಅನೇಕ ಜನರು ತಿಳಿಸಿದ್ದಾರೆ.