ಬೆಂಗಳೂರು: ಸತತ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಕರ್ನಾಟಕ ರಾಜ್ಯ ತಂಡದ ಪಾಲಿಗೆ ಗುಡ್ನ್ಯೂಸ್ ಸಿಕ್ಕಿದೆ. ಅಗರ್ತಲದಿಂದ ಸೂರತ್ಗೆ ಪ್ರಯಾಣ ಬೆಳೆಸುವಾಗ ವಿಮಾನದಲ್ಲಿ ದಿಢೀರ್ ಅಸ್ವಸ್ಥಗೊಂಡಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ತಂಡದ ನಾಯಕ ಮಯಾಂಕ್ ಅಗರ್ವಾಲ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಐದನೇ ಸುತ್ತಿನಲ್ಲಿ ಚೆನ್ನೆ$ನಲ್ಲಿ ನಡೆಯಲಿರುವ ತಮಿಳುನಾಡು ವಿರುದ್ಧದ ಮಹತ್ವದ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲು ಸಂಪೂರ್ಣ ಫಿಟ್ ಆಗಿದ್ದಾರೆ. ಭಾರತ ಎ ತಂಡದ ಕರ್ತವ್ಯಕ್ಕೆ ತೆರಳಿದ್ದ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ಸಹ ಪಂದ್ಯಕ್ಕೆ ಲಭ್ಯರಿದ್ದು ರಾಜ್ಯದ ಬಲ ಮತ್ತಷ್ಟು ಹೆಚ್ಚಿಸಿದೆ.
ಸಿ ಗುಂಪಿನ ಅಗ್ರಸ್ಥಾನಕ್ಕಾಗಿ ಎರಡು ತಂಡಗಳು ಕಾದಾಟ ನಡೆಸಲಿದ್ದು, ಕರ್ನಾಟಕ ತಂಡ 2 ಬದಲಾವಣೆ ಮಾಡಿದೆ. ಡಿ.ನಿಶ್ಚಲ್ ಹಾಗೂ ಎಡಗೈ ವೇಗಿ ಅಭಿಲಾಷ್ ಶೆಟ್ಟಿ ಅವರನ್ನು ತಂಡದಿಂದ ಕೈ ಬಿಡಲಾಗಿದ್ದು, ಅವರ ಸ್ಥಾನಕ್ಕೆ ಮಯಾಂಕ್ ಅಗರ್ವಾಲ್ ಮತ್ತು ದೇವದತ್ ಪಡಿಕ್ಕಲ್ ತಂಡಕ್ಕೆ ಮರಳಿದ್ದಾರೆ. ತ್ರಿಪುರ ವಿರುದ್ಧದ ಪಂದ್ಯದ ಬಳಿಕ ರೈಲ್ವೇಸ್ ವಿರುದ್ಧದ ಪಂದ್ಯಕ್ಕಾಗಿ ವಿಮಾನ ಹತ್ತಿದ ಮಯಾಂಕ್ ಅಗರ್ವಾಲ್ ಸೀಟಿನ ಮುಂಭಾಗದ ಪೌಚ್ನಲ್ಲಿದ್ದ ದ್ರವವನ್ನು ಸೇವಿಸಿ ಅಸ್ವಸ್ಥರಾಗಿದ್ದರು ಇದರಿಂದ ರೈಲ್ವೇಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ವೈದ್ಯರಿಂದ ಹಸಿರು ನಿಶಾನೆ ಪಡೆದಿರುವ 32 ವರ್ಷದ, ಮಯಾಂಕ್ ಹಾಲಿ ಋತುವಿನಲ್ಲಿ ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ 2 ಶತಕ ಸಹಿತ 310 ರನ್ ಬಾರಿಸಿದ್ದಾರೆ. ಮೊದಲ ಮೂರು ಪಂದ್ಯಗಳಲ್ಲಿ ರಾಜ್ಯದ ಪರ ಕಣಕ್ಕಿಳಿದಿದ್ದ ದೇವದತ್ ಪಡಿಕ್ಕಲ್ 2 ಶತಕ ಸಹಿತ 369 ರನ್ ಸಿಡಿಸಿದ್ದಾರೆ. ೆ.9 ರಿಂದ ರಣಜಿ ಟ್ರೋಫಿ ಐದನೇ ಸುತ್ತಿನ ಪಂದ್ಯಗಳು ಆರಂಭವಾಗಲಿವೆ.