ನವದೆಹಲಿ: ಕೂದಲೆಳೆ ಅಂತರದಲ್ಲಿ ನೇರವಾಗಿ ಎಂಟರಘಟ್ಟಕ್ಕೇರುವ ಅವಕಾಶ ತಪ್ಪಿಸಿಕೊಂಡ ಮಾಜಿ ಚಾಂಪಿಯನ್ ಕರ್ನಾಟಕ ತಂಡ ಮಂಗಳವಾರ ನಡೆಯಲಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಪ್ರಿಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ. ವಾಯು ಮಾಲಿನ್ಯದ ನಡುವೆಯೂ ರಾಷ್ಟ್ರ ರಾಜಧಾನಿ ನಾಕೌಟ್ ಹಂತದ ಪಂದ್ಯಗಳಿಗೆ ಸನ್ನದ್ಧವಾಗಿದೆ. ದೆಹಲಿ ನಗರದ ಕೇಂದ್ರ ಭಾಗದಲ್ಲಿರುವ ಫಿರೋಜ್ ಷಾ ಕೋಟ್ಲಾದಲ್ಲಿರುವ ಅರುಣ್ ಜೇಟ್ಲಿ ಮೈದಾನದಲ್ಲೆ ಎರಡು ಪಂದ್ಯಗಳು ನಡೆಯಲಿದ್ದು, ಸ್ಥಳೀಯ ವಾಯು ಗುಣಮಟ್ಟದ ಸೂಚ್ಯಂಕ (ಎಕ್ಯೂಐ) 249 ರಷ್ಟಿದೆ.
* ಮಯಾಂಕ್, ಪಡಿಕಲ್ ಗೈರು
ಪ್ರಮುಖ ಆಟಗಾರರಾದ ಮಯಾಂಕ್ ಅಗರ್ವಾಲ್, ಪ್ರಸಿದ್ಧ ಕೃಷ್ಣ ಕೆ.ಗೌತಮ್ ಹಾಗೂ ದೇವದತ್ ಪಡಿಕಲ್ ರಾಷ್ಟ್ರೀಯ ತಂಡದಿಂದ ಕರೆ ಪಡೆದಿರುವ ಹಿನ್ನೆಲೆಯಲ್ಲಿ ನಾಕೌಟ್ ಹಂತಕ್ಕೆ ಅಲಭ್ಯರಾಗಲಿದ್ದಾರೆ. ಮಯಾಂಕ್, ಪ್ರಸಿದ್ಧ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಹಾಗೂ ಕೆ.ಗೌತಮ್ ಹಾಗೂ ಪಡಿಕಲ್ ಭಾರತ ಎ ತಂಡದೊಂದಿಗೆ ದ.ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದಾರೆ. ಲೀಗ್ ಹಂತದಲ್ಲಿ ಸತತ 4 ಜಯ ದಾಖಲಿಸಿದ್ದ ಕರ್ನಾಟಕ ತಂಡ, ಕಡೇ ಲೀಗ್ ಪಂದ್ಯದಲ್ಲಿ ಬಂಗಾಳ ತಂಡಕ್ಕೆ ಶರಣಾಗಿತ್ತು. ರನ್ ರೇಟ್ ಲೆಕ್ಕಾಚಾರದಲ್ಲಿ ಹಿನ್ನಡೆ ಅನುಭವಿಸಿದ ಕರ್ನಾಟಕ ತಂಡ ಸ್ವಲ್ಪದರದಲ್ಲೇ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಅವಕಾಶ ತಪ್ಪಿಸಿಕೊಂಡಿತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಬಲಿಷ್ಠವಾಗಿರುವ ಕರ್ನಾಟಕ ತಂಡ ಮೇಲ್ನೋಟಕ್ಕೆ ಬಲಿಷ್ಠವಾಗಿದೆ. ನಾಯಕ ಮನೀಷ್ ಪಾಂಡೆ, ಅನುಭವಿ ಕರುಣ್ ನಾಯರ್ ಭರ್ಜರಿ ಫಾರ್ಮ್ನಲ್ಲಿದ್ದರೆ, ಜೆ.ಸುಚಿತ್, ವೈಶಾಕ್ ವಿಜಯ್ಕುಮಾರ್, ಕೆಸಿ ಕಾರ್ಯಪ್ಪ ಒಳಗೊಂಡ ಬೌಲಿಂಗ್ ಪಡೆ ಉತ್ತಮ ಲಯದಲ್ಲಿದೆ.
ಪಂದ್ಯ ಆರಂಭ: ಮಧ್ಯಾಹ್ನ 1 ಗಂಟೆಗೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್-1
ಇತರ ಪಂದ್ಯಗಳು
ಮಹಾರಾಷ್ಟ್ರ- ವಿದರ್ಭ
ಪಂದ್ಯ ಆರಂಭ: ಬೆಳಗ್ಗೆ 8.30ಕ್ಕೆ
ಸ್ಥಳ: ಅರುಣ್ ಜೇಟ್ಲಿ ಮೈದಾನ
==
ಹಿಮಾಚಲ ಪ್ರದೇಶ-ಕೇರಳ
ಆರಂಭ: ಮಧ್ಯಾಹ್ನ 12ಕ್ಕೆ
ಸ್ಥಳ: ಏರ್ ಫೋರ್ಸ್ ಮೈದಾನ, ಪಾಲಂ