ಕಾರಟಗಿ: ದೇಶದ ಅಭಿವೃದ್ಧಿಗಾಗಿ ಎಲ್ಲರೂ ಸ್ವಾರ್ಥ ಬದಿಗಿಟ್ಟು ಒಂದಾಗಬೇಕಿದೆ ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಭಾನುವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶದ ಸ್ವಾವಲಂಬನೆಗೆ ಒಗ್ಗಟ್ಟಿನಿಂದ ಶ್ರಮಿಸಬೇಕಾಗಿದೆ. ಬ್ರಿಟೀಷರ ದಾಸ್ಯದ ಸಂಕೋಲೆ ತೊಡೆದುಹಾಕಲು ಅನೇಕರು ಜೀವ ಹಾಗೂ ಜೀವನವನ್ನು ತ್ಯಾಗ ಮಾಡಿದ್ದಾರೆ.
ನೂರಾರು ವರ್ಷಗಳ ಅವಿರತ ಹೋರಾಟದ ಫಲವಾಗಿ ನಾವೆಲ್ಲ ಘನತೆಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಸ್ವಾವಲಂಬನೆಯ ಬದುಕು ಸಾಕಾರಗೊಂಡಾಗ ಹಿರಿಯರ ಹೋರಾಟ ಸಾರ್ಥಕಗೊಳ್ಳಲಿದೆ ಎಂದರು. ಸಿಂಗನಾಳ, ಹಾಲಸಮುದ್ರ ಹಾಗೂ ಅಯೋಧ್ಯಾ ಗ್ರಾಮದ ಸರ್ಕಾರಿ ಜಮೀನಿನಲ್ಲಿ ವಾಸಿಸುತ್ತಿದ್ದ 75 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಯಿತು.