ಲಖನೌ: ಖತರ್ನಾಕ್ ಖದೀಮರು ಸುರಂಗ ಕೊರೆದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಬ್ಯಾಂಕ್ನಿಂದ 1 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಸಿನಿಮಾ ಶೈಲಿಯಲ್ಲಿ ದೋಚಿರುವ ಆತಂಕಕಾರಿ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಕಾನ್ಪುರ ಜಿಲ್ಲೆಯ ಸಚೇಂದಿ ಉಪನಗರದ ಭನುತಿ ಶಾಖೆಯ ಎಸ್ಬಿಐ ಬ್ಯಾಂಕ್ನಲ್ಲಿ ಕಳ್ಳತನ ನಡೆದಿದೆ. ಬ್ಯಾಂಕ್ಗೆ ಹೊಂದಿಕೊಂಡಂತಿದ್ದ ಖಾಲಿ ನಿವೇಶನದಲ್ಲಿ ಸುಮಾರು 10 ಅಡಿ ಉದ್ದದ ಸುರಂಗ ಕೊರೆದಿರುವ ಖದೀಮರು ತಮ್ಮ ಕೈಚಳಕ ತೋರಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸುರಂಗದ ಮೂಲಕ ಸ್ಟ್ರಾಂಗ್ರೂಮ್ಗೆ ನುಗ್ಗಿದ ಕಳ್ಳರು ಚಿನ್ನಾಭರಣವಿದ್ದ ಲಾಕರ್ ಒಡೆಯಲು ಯಶಸ್ವಿಯಾದರು. ಆದರೆ, 32 ಲಕ್ಷ ರೂಪಾಯಿ ನಗದು ಹಣವಿದ್ದ ಮತ್ತೊಂದು ಲಾಕರ್ ತೆರೆಯಲು ವಿಫಲರಾಗಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಪಶ್ಚಿಮ) ವಿಜಯ್ ಧುಲ್ ಹೇಳಿದ್ದಾರೆ.
ಎಷ್ಟು ಪ್ರಮಾಣದ ಆಭರಣ ಕಳ್ಳತನವಾಗಿದೆ ಎಂದು ಅಂದಾಜಿಸಲು ಬ್ಯಾಂಕ್ ಅಧಿಕಾರಿಗಳು ತುಂಬಾ ಸಮಯ ಹಿಡಿಯಿತು. ಸುಮಾರು 1.8 ಕೆಜಿ ತೂಕದ 1 ಕೋಟಿ ರೂ. ಮೌಲ್ಯದ ಆಭರಣ ಕಳ್ಳತನವಾಗಿದೆ ಎಂದು ಧುಲ್ ಮಾಹಿತಿ ನೀಡಿದ್ದಾರೆ. ಅಲ್ಲದೆ, ದರೋಡೆಯ ತನಿಖೆ ನಡೆಸಿದ ಪೊಲೀಸರು ಮತ್ತು ವಿಧಿವಿಜ್ಞಾನ ಅಧಿಕಾರಿಗಳು ಬ್ಯಾಂಕ್ನ ಸ್ಟ್ರಾಂಗ್ರೂಮ್ನ ಪಕ್ಕದ ಖಾಲಿ ಜಾಗದಿಂದ ಸುರಂಗವನ್ನು ಅಗೆದು ಪೊದೆಗಳಿಂದ ಮುಚ್ಚಿರುವುದನ್ನು ಕಂಡುಕೊಂಡಿರುವುದಾಗಿ ತಿಳಿಸಿದ್ದಾರೆ.
ಇದು ಪರಿಣಿತ ಖದೀಮರ ಸಹಾಯದಿಂದ ಗೊತ್ತಿರುವವರೇ ಎಸಗಿರುವ ಅಪರಾಧ ಆಗಿರಬಹುದು. ಬ್ಯಾಂಕ್ನ ಸಂಪೂರ್ಣ ಮಾಹಿತಿ ಪಡೆದು, ಸ್ಟ್ರಾಂಗ್ರೂಮ್ ಎಲ್ಲಿದೆ ಎಂದು ತಿಳಿದು, ಅಲ್ಲಿಗೆ ಸುರಂಗ ಕೊರೆದು ಕಳ್ಳತನ ಮಾಡಿದ್ದಾರೆ. ಸದ್ಯ ಸ್ಟ್ರಾಂಗ್ರೂಮ್ನಿಂದ ಫಿಂಗರ್ಪ್ರಿಂಟ್ಗಳು ಸೇರಿದಂತೆ ಕೆಲವು ಸುಳಿವುಗಳನ್ನು ನಾವು ಕಂಡುಕೊಂಡಿದ್ದೇವೆ, ಅದು ದರೋಡೆಯನ್ನು ಭೇದಿಸಲು ನಮಗೆ ಸಹಾಯ ಮಾಡುತ್ತದೆ ಎಂದು ಧುಲ್ ಹೇಳಿದ್ದಾರೆ.
ಕಳೆದ ಶುಕ್ರವಾರ ಬೆಳಗ್ಗೆ ಬ್ಯಾಂಕ್ ಅಧಿಕಾರಿಗಳು ಲಾಕರ್ ಓಪನ್ ಮಾಡಿದಾಗ ದರೋಡೆ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸ್ ಕಮಿಷನರ್ ಬಿಪಿ ಜೋಗ್ದಂಡ್ ತಿಳಿಸಿದ್ದಾರೆ. ಅನೇಕ ತನಿಖಾ ತಂಡಗಳನ್ನು ರಚನೆ ಮಾಡಿದ್ದು, ಕಾರ್ಯಾಚರಣೆಗೆ ಇಳಿದಿವೆ.
ಅಡಮಾನ ಇಟ್ಟು ಸಾಲ ತೆಗೆದುಕೊಂಡಿದ್ದ ಸುಮಾರು 29 ಮಂದಿಗೆ ಆ ಚಿನ್ನಾಭರಣ ಸೇರಿದ್ದು ಎಂದು ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ. (ಏಜೆನ್ಸೀಸ್)
ವಿಜಯಮಾಲೆಗಾಗಿ ಬಿಎಸ್ವೈ ಪುತ್ರನ ಶಿಕಾರಿ: ಬಿಜೆಪಿ ಬಾವುಟ ಹಾರಿಸಲು ಅಪ್ಪನ ಬಳಿಕ ಮಗನಿಗೆ ಸಿಗಲಿದೆಯೇ ಅವಕಾಶ?
ಸಿನಿಮಾ ಬಿಡುಗಡೆಯಾಗಿ 3 ತಿಂಗಳಾದ್ಮೇಲೆ ಕಾಂತಾರ ಕ್ಲೈಮ್ಯಾಕ್ಸ್ನ ಅಸಲಿ ಸತ್ಯ ಬಿಚ್ಚಿಟ್ಟ ರಿಷಭ್ ಶೆಟ್ಟಿ!