ಬೆಂಗಳೂರು: ರಾಜ್ಯದ ಎಟಿಎಂಗಳಲ್ಲಿ ಮಾಯವಾಗಿರುವ ಕನ್ನಡ ಭಾಷಾ ಸೌಲಭ್ಯವನ್ನು ಕೂಡಲೇ ಮರು ಜಾರಿಗೊಳಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬ್ಯಾಂಕ್ಗಳಿಗೆ ಖಡಕ್ ಸೂಚನೆ ನೀಡಿದೆ. ‘ಎಟಿಎಂನಲ್ಲಿ ಕನ್ನಡ ಮಾಯ’ ಶೀರ್ಷಿಕೆಯಡಿ ‘ವಿಜಯವಾಣಿ’ಯಲ್ಲಿ ಸೋಮವಾರ ಪ್ರಕಟವಾದ ವಿಶೇಷ ವರದಿಯನ್ನು ಉಲ್ಲೇಖಿಸಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ರಾಜ್ಯದ ಮಾರ್ಗದರ್ಶಿ(ಲೀಡ್) ಬ್ಯಾಂಕ್ಗೆ ಪತ್ರ ಬರೆದಿದ್ದಾರೆ.
ಬ್ಯಾಂಕಿಂಗ್ ಸೇರಿ ಆಡಳಿತದ ಎಲ್ಲ ಹಂತದಲ್ಲೂ ಕನ್ನಡ ಅನುಷ್ಠಾನ ಸಂಬಂಧ 350ಕ್ಕೂ ಹೆಚ್ಚು ಆದೇಶಗಳನ್ನು ಸರ್ಕಾರ ಹೊರಡಿಸಿದೆ. ಈ ಹಿಂದೆ ಅನೇಕ ಸೂಚನೆಗಳನ್ನು ನೀಡಿದ್ದರ ಜತೆಗೆ ನ.11ರಂದು ರಾಜ್ಯ ಮಟ್ಟದ ಬ್ಯಾಂಕರ್ಗಳ ಸಮಿತಿ ಸಭೆಯನ್ನು ಆಯೋಜಿಸಿ ಕನ್ನಡ ಬಳಕೆ ಕುರಿತು ನಿರ್ದೇಶನ ನೀಡಿದ್ದರೂ ಆಗಿರುವ ಬದಲಾವಣೆ ನಿರೀಕ್ಷಿತ ಮಟ್ಟದಲ್ಲಾಗಿಲ್ಲ ಎಂದು ಅವರು ಬೇಸರ ಹೊರಹಾಕಿದ್ದಾರೆ. ಎಟಿಎಂಗಳಲ್ಲಿ ಕನ್ನಡ ಕಡೆಗಣನೆ ಕುರಿತು ‘ವಿಜಯವಾಣಿ’ಯಲ್ಲಿ ದಾಖಲೆ ಸಮೇತ ವರದಿ ಮಾಡಲಾಗಿದೆ. ಈ ಸಂಬಂಧ ಕನ್ನಡವನ್ನು ಪ್ರಧಾನ ಆಯ್ಕೆಯನ್ನಾಗಿ ನೀಡುವಂತೆ ಬ್ಯಾಂಕ್ಗಳಿಗೆ ಸೂಕ್ತ ಸುತ್ತೋಲೆ ಹೊರಡಿಸಬೇಕು. ಕನ್ನಡ ಆಯ್ಕೆ ನೀಡುವ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅನುಷ್ಠಾನದ ಕುರಿತು ವಾರದಲ್ಲಿ ಪ್ರಾಧಿಕಾರಕ್ಕೆ ವರದಿ ನೀಡಬೇಕೆಂದು ನಾಗಾಭರಣ ಲೀಡ್ ಬ್ಯಾಂಕ್ಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಇಂದಿನಿಂದ ಅಭಿಯಾನ
ಎಟಿಎಂ ಸೇರಿ ಎಲ್ಲ ಬ್ಯಾಂಕಿಂಗ್ ವ್ಯವಹಾರಗಳನ್ನೂ ಕನ್ನಡದಲ್ಲಿ ನೀಡಬೇಕೆಂದು ಆಗ್ರಹಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ‘ಬ್ಯಾಂಕ್ಗಳಲ್ಲಿ ಕನ್ನಡ ಬಳಕೆ ಅಭಿಯಾನ’ಕ್ಕೆ ಮಂಗಳವಾರ ಚಾಲನೆ ನೀಡಲಾಗುತ್ತಿದೆ. ಕನ್ನಡ ಕಾಯಕ ವರ್ಷಾಚರಣೆ ಭಾಗವಾಗಿ ಒಂದು ವಾರ ನಡೆಯಲಿದೆ. ರಾಜ್ಯ, ಜಿಲ್ಲಾ ಮಟ್ಟದಲ್ಲಿ ಲೀಡ್ ಬ್ಯಾಂಕ್ಗಳ ಬಳಿ ಅಭಿಯಾನ ಚಾಲನೆ ಪಡೆಯಲಿದೆ. ಬೆಳಗ್ಗೆ 10ಕ್ಕೆ ಜಿಲ್ಲಾ ಲೀಡ್ ಬ್ಯಾಂಕ್ಗಳ ಮುಂಭಾಗದಲ್ಲಿ ಜಾಗೃತಿ ಅಭಿಯಾನವನ್ನು ಪ್ರಾಧಿಕಾರದ ಎಲ್ಲ ಅಧಿಕಾರೇತರ ಸದಸ್ಯರು, ಕನ್ನಡ ಜಾಗೃತಿ ಸಮಿತಿಯ ಜಿಲ್ಲಾ, ಕರ್ನಾಟಕದ ಎಲ್ಲ ಮಹಾನಗರ ಪಾಲಿಕೆ ಸದಸ್ಯರು ಮತ್ತು ಬೆಂಗಳೂರಿನ ಶಾಸಕರು, ಕಾಯಕ ಪಡೆಯ ಸ್ವಯಂ ಪ್ರೇರಿತ ಕಾರ್ಯಕರ್ತರು ಶಾಖಾ ವ್ಯವಸ್ಥಾಪಕರಿಗೆ, ಜಾಗೃತಿ ಅಭಿಯಾನಕ್ಕೆ ಸಂಬಂಧಿಸಿದ ಕರಪತ್ರ ಹಾಗೂ ಘೊಷವಾಕ್ಯಗಳನ್ನು ನೀಡುವ ಮೂಲಕ ಚಾಲನೆ ನೀಡಲಾಗುತ್ತದೆ. ನಂತರ ಬ್ಯಾಂಕ್ ಮುಂಭಾಗದಲ್ಲಿ ಘೊಷವಾಕ್ಯಗಳನ್ನು ಪ್ರದರ್ಶಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಕರ್ನಾಟಕದ ಯಾವುದೇ ಭಾಗದ ಬ್ಯಾಂಕ್ನಲ್ಲಿ ಕನ್ನಡದ ವ್ಯವಹಾರ ಬಯಸುವ ಕನ್ನಡಿಗರು ಈ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು. ಬೆಂಗಳೂರಿನಲ್ಲಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್. ನಾಗಾಭರಣ ರಾಜ್ಯ ಮಟ್ಟದ ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕ್ ಎದುರು ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ. ಮುರಳೀಧರ ತಿಳಿಸಿದ್ದಾರೆ.
ಇ-ಟ್ರೆಂಡಿಂಗ್
ಇನ್ನು ಬ್ಯಾಂಕ್ಗಳ ಕನ್ನಡ ನಿರ್ಲಕ್ಷ್ಯ ನಡೆ ಬಹಿರಂಗಗೊಳಿಸಿದ ವಿಜಯವಾಣಿಯ ವಿಶೇಷ ವರದಿ ದಿನಪೂರ್ತಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ. ಸರ್ಕಾರ ಜನರ ದೈನಂದಿನ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು. ಕೇವಲ ಕನ್ನಡವನ್ನಷ್ಟೇ ಬಳಸುವಂತಾಗಬೇಕೆಂದು ಸಾಮಾಜಿಕ ಜಾಲತಾಣ ಕಾರ್ಯಕರ್ತ ಅರುಣ್ ಜಾವಗಲ್ ಸೇರಿ ಅನೇಕರು ಆಗ್ರಹಿಸಿದ್ದಾರೆ.
ಯುವಜನೋತ್ಸವ ತಡೆ ಹಿಡಿಯಿರಿ
ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಯುವಜನೋತ್ಸವದಲ್ಲಿ ಕನ್ನಡಕ್ಕೆ ಆದ್ಯತೆ ನೀಡದೆ ಇರುವುದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಸಮಾಧಾನ ವ್ಯಕ್ತಪಡಿಸಿದೆ. ಉತ್ಸವವನ್ನು ತಡೆ ಹಿಡಿಯುವಂತೆ ಇಲಾಖೆಗೆ ಪತ್ರ ಬರೆದಿದೆ. ತುಮಕೂರು ಜಿಲ್ಲಾ ಯುವಜನೋತ್ಸವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಹಿಂದಿ ಮತ್ತು ಇಂಗ್ಲಿಷ್ ಆಯ್ಕೆ ಮಾತ್ರ ನೀಡಲಾಗಿದೆ. ಇದು ರಾಜ್ಯವು ಅಳವಡಿಸಿಕೊಂಡಿರುವ ಭಾಷಾ ನೀತಿಗೆ ವಿರುದ್ಧವಾಗಿದೆ. ಈ ಕುರಿತು ಸೆ.24ರಂದು ಇಲಾಖೆೆಯೊಂದಿಗಿನ ಕನ್ನಡ ಅನುಷ್ಠಾನ ಸಭೆಯಲ್ಲೂ ನಿರ್ದೇಶನ ನೀಡಲಾಗಿತ್ತು. ಆದರೂ ನಿರ್ದೇಶನ ಕಡೆಗಣಿಸಿ ಆಯೋಜನೆ ಮಾಡುತ್ತಿರುವುದು ಅಧಿಕಾರಿಗಳ ಕರ್ತವ್ಯಲೋಪವಾಗಿದೆ. ಯುವಜನೋತ್ಸವವನ್ನು ತಡೆಹಿಡಿಯುವಂತೆ ಹಾಗೂ ಸ್ಪರ್ಧೆಯಲ್ಲಿ ಕನ್ನಡವನ್ನು ಪ್ರಧಾನವಾಗಿ ಬಳಸುವಂತೆ ಎಲ್ಲ ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳಿಗೆ ತಿಳಿಸಬೇಕು ಎಂದು ತಿಳಿಸಲಾಗಿದೆ. ಈ ಪತ್ರವನ್ನು ಎಲ್ಲ ಜಿಲ್ಲಾಧಿಕಾರಿಗಳಿಗೂ ಬರೆಯಲಾಗಿದೆ.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಸೋಮಶೇಖರ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, ಇಂಗ್ಲಿಷ್, ಹಿಂದಿ ಭಾಷೆಗಳನ್ನು ವೈಭವೀಕರಿಸುವ ಇಂತಹ ಉತ್ಸವಗಳು ನಾಡಿನ ಭಾಷೆ ಸಂಸ್ಕೃತಿಯ ಬಗ್ಗೆ ಗೌರವ ಆದ್ಯತೆ ತೋರದಿದ್ದರೆ ಅಂತಹ ಉತ್ಸವಗಳಿಂದ ನಮ್ಮ ಯುವಕರಿಗೆ ಯಾವ ಪ್ರಯೋಜನವೂ ಆಗಲಾರದು. ಕೇಂದ್ರದ ಪ್ರಾಯೋಜಿತ ಕಾರ್ಯಕ್ರಮವಾದರೂ ಅದನ್ನು ವ್ಯವಸ್ಥೆಗೊಳಿಸುವುದು ನಮ್ಮ ಸರ್ಕಾರದ ಯುವಜನ ಸೇವಾ ಇಲಾಖೆಯೇ. ಅಂದಮೇಲೆ ಈ ಬಗ್ಗೆ ರಾಜ್ಯ ಯುವಜನ ಸೇವಾ ಇಲಾಖೆಯ ನಿರ್ದೇಶಕರು ಮತ್ತು ಜಿಲ್ಲೆಯ ಜಿಲ್ಲಾಧಿಕಾರಿಗಳು ಆಸಕ್ತಿ ತೋರಬೇಕು. ಇನ್ನು ಮುಂದೆ ಕೇಂದ್ರ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮಗಳಲ್ಲೆಲ್ಲ ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳು ಕಡ್ಡಾಯವಾಗಿ ರೂಪುಗೊಳ್ಳಬೇಕು ಎಂಬ ನಿರ್ದೇಶನವನ್ನು ಸರ್ಕಾರ ಸಂಬಂಧಪಟ್ಟವರಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
VIDEO| ನಿತ್ಯ ಪೂಜೆ ವೇಳೆಗೆ ಬರುತ್ತೆ ಈ ಹಾವು! ಗಣಪತಿಗೆ ಪ್ರದಕ್ಷಿಣೆ ಹಾಕಿ ವಾಪಸ್ ಹೋಗುತ್ತೆ
‘ಸೆಕ್ಸ್ಪರ್ಟ್’ ಇನ್ನಿಲ್ಲ: ಇವರಿದ್ದಾಗ ಸಿಕ್ಕಿತ್ತು ಅದೆಷ್ಟೋ ಮಂದಿಗೆ ಸಾಂತ್ವನ-ಸಮಾಧಾನ…
ಮೆಟ್ರೋನಲ್ಲೇ ಕಿಸ್ಸಿಂಗ್! ನಿರ್ಬಂಧಗಳನ್ನು ವಿರೋಧಿಸಿ ಸಾರ್ವಜನಿಕವಾಗಿ ಕಿಸ್ ಮಾಡಲು ಆರಂಭಿಸಿದ ಜೋಡಿಗಳು