ನರಗುಂದ: ಜಾತ್ಯತೀತ ಆಧಾರದ ಮೇಲೆ ಅಕ್ಷರ ದೀಪ ಬೆಳಗಿಸಿದವರು ಡಾ. ತೋಂಟದ ಶ್ರೀಗಳು. ಬುದ್ಧ, ಬಸವ, ಅಂಬೇಡ್ಕರ್ ಅವರನ್ನೊಳಗೊಂಡು ಸಾವಿತ್ರಿಭಾಯಿ ಫುಲೆ, ಜ್ಯೋತಿಬಾ ಫುಲೆ, ಸಂತ ಸೇವಾಲಾಲ ಅವರಂತಹ ಪ್ರಗತಿಪರ ಚಿಂತಕರು, ಸಮಾಜ ಸೇವಕರ 600ಕ್ಕೂ ಅಧಿಕ ಪುಸ್ತಕಗಳನ್ನು ಪ್ರಕಟಿಸಿ ಈ ಮೂಲಕ ತಾಯಿ ಭುವನೇಶ್ವರಿಗೆ ಅಕ್ಷರದ ನಮನ ಸಲ್ಲಿಸಿದ್ದಾರೆ ಎಂದು ಉಪನ್ಯಾಸಕ ಎಂ.ಎಸ್. ಯಾವಗಲ್ ಹೇಳಿದರು.
ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡೋತ್ಸವ ಉಪನ್ಯಾಸ ಮಾಲೆ-2ರ ಕಾರ್ಯಕ್ರಮದಲ್ಲಿ ‘ಕನ್ನಡ ಸಾಹಿತ್ಯಕ್ಕೆ ಡಾ.ತೋಂಟದ ಸಿದ್ಧಲಿಂಗ ಶ್ರೀಗಳ ಕೊಡುಗೆ’ ಕುರಿತು ಅವರು ಮಾತನಾಡಿದರು.
‘ಒಂದು ವಿಶ್ವ ವಿದ್ಯಾಲಯ ಮಾಡಲಾರದ ಸೇವೆಯನ್ನು ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಮಾಡಿ ತೋರಿಸಿದ್ದಾರೆ. ಬಸವ ತತ್ತ್ವನ್ನು ಒಪ್ಪಿಕೊಂಡು ಲಿಂಗಾಯತ ಹೋರಾಟಕ್ಕೆ ಬಹುದೊಡ್ಡ ಶಕ್ತಿಯಾಗಿದ್ದರು. 50 ವರ್ಷಗಳಿಂದ ನಿರಂತರ ಸಾಪ್ತಾಹಿಕ ಶಿವಾನುಭವದ ಮೂಲಕ ನಾಡಿನ ಸಾಹಿತ್ಯಿಕ, ಸಾಂಸ್ಕೃತಿಕ ರಾಯಭಾರಿಯಂತೆ ಶ್ರೀಗಳು ಮಾಡಿರುವ ಕಾರ್ಯ ದಾಖಲೆಯಾಗಿದೆ. ಸಮಾಜದಲ್ಲಿರುವ ಅಜ್ಞಾನ, ಅಂಧಕಾರ, ಮೂಢನಂಬಿಕೆ ತೆಗೆದು ಹಾಕಿ ಸರ್ವರಿಗೂ ವೇದಿಕೆ ಕಲ್ಪಿಸಿಕೊಟ್ಟಿರುವ ಕೀರ್ತಿ ತೋಂಟದ ಸಿದ್ಧಲಿಂಗ ಶ್ರೀಗಳಿಗೆ ಸಲ್ಲುತ್ತದೆ. ಮಣ್ಣು ದೇಶದ ರೈತನ ಕಣ್ಣು. ವಿಜ್ಞಾನ ಎಷ್ಟೇ ಮುಂದುವರಿದರೂ ಒಂದು ಹಿಡಿ ಮಣ್ಣು ತಯಾರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ’ ಎಂದರು.
ಶಾಂತಲಿಂಗ ಶ್ರೀಗಳು ಮಾತನಾಡಿದರು. ಮಂಗಳಾ ಪಾಟೀಲ, ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚನ್ನಬಸಪ್ಪ ಕಂಠಿ, ವಿಠ್ಠಲ ಶಿಂಧೆ, ಮಾರುತಿ ಬೋಸ್ಲೆ, ಎಂ.ಪಿ. ಕುಲಕರ್ಣಿ, ಶಿವಾನಂದ ಮಣ್ಣೂರಮಠ, ನೀಲಕಂಠ ಚೌಕಿಮಠ, ಕಾಡಯ್ಯ ಚೌಕಿಮಠ, ವಿ.ಎನ್. ಕೊಳ್ಳಿಯವರ, ಸುರೇಶ ಹುಯಿಲಗೋಳ, ಜೆ.ಆರ್. ಕದಂ, ಬಸು ಪಾಟೀಲ, ಜಿ.ಎಸ್. ಯಾವಗಲ್, ಚಂದ್ರಗೌಡ ಪಾಟೀಲ, ಶಿವಪ್ಪ ಬೋಳಶೆಟ್ಟಿ, ಗಂಗಮ್ಮ ಪಾಟೀಲ, ಸುಕನ್ಯಾ ಸಾಲಿ, ಸಿದ್ಧೇಶ್ವರ ಕಾಲೇಜ್ ಪಾಚಾರ್ಯ ಎಂ.ಡಿ. ಕಮತಗಿ, ಪಿ.ಎಸ್. ಅಣ್ಣಿಗೇರಿ, ಸೀಮಣ್ಣ ಗೋವೇಶ್ವರ ಇತರರಿದ್ದರು. ಆರ್.ಬಿ. ಚಿನಿವಾಲರ, ಆರ್.ಕೆ. ಐನಾಪೂರ ನಿರ್ವಹಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮಣ್ಣ ಬ್ಯಾಟಿಯವರಂತಹ ನಿರಕ್ಷರಿಯಿಂದ ಭಾಮಿನಿ ಷಟ್ಪದಿಯಲ್ಲಿ ಪುಸ್ತಕಗಳನ್ನು ಬರೆಸಿರುವ ಕೀರ್ತಿ ಜಗದ್ಗುರುಗಳಿಗೆ ಸಲ್ಲುತ್ತದೆ. ಅಕ್ಷರ, ಆಹಾರ, ಆಶ್ರಯ ನೀಡಿದ ತ್ರಿವಿಧ ದಾಸೋಹಿಗಳಾದ ತೋಂಟದ ಸಿದ್ಧಲಿಂಗ ಶ್ರೀಗಳು ಊರು-ಕೇರಿ ಒಂದು ಮಾಡಿ ಅವರೊಂದಿಗೆ ಸಮನಾಗಿ ಬೆರಿ, ಇದುವೇ ಮನುಷ್ಯನಾಗುವ ಪರಿ ಎಂದು ಹೇಳಿ ದಲಿತೋದ್ಧಾರ ಕುರಿತು ನಿರಂತರವಾಗಿ ಚಿಂತನ ಮಂಥನವನ್ನು ಮಾಡಿದ್ದರು.
| ಶಾಂತಲಿಂಗ ಶ್ರೀಗಳು