ಬೆಂಗಳೂರು: ರ್ಯಾಪರ್, ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ‘ಎಲ್ರ ಕಾಲೆಳೆಯುತ್ತೆ ಕಾಲ’ ಚಿತ್ರದ ಮೂಲಕ ನಾಯಕನಾಗಿ ಸ್ಯಾಂಡಲ್ವುಡ್ ಡೆಬ್ಯೂ ಮಾಡುತ್ತಿದ್ದು, ಅದರ ಬೆನ್ನಲ್ಲೇ ‘ಸೂತ್ರಧಾರಿ’ ಎಂಬ ಮತ್ತೊಂದು ಸಿನಿಮಾ ಕೂಡ ಸೆಟ್ಟೇರಿದೆ.
ಈ ಎರಡು ಚಿತ್ರಗಳ ಬಿಡುಗಡೆಗೂ ಮುನ್ನವೇ ಚಂದನ್ ಮತ್ತೊಂದು ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ‘ಲೂಸ್ಗಳು’ ಸಿನಿಮಾ ನಿರ್ದೇಶಿಸಿದ್ದ ಅರುಣ್ ಅಮುಕ್ತ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದು, ವರಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭದಲ್ಲಿ ಇದೇ 25ರಂದು ಟೈಟಲ್ ೋಷಿಸಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ. ಇದೊಂದು ಟೀನೇಜ್ ಡ್ರಾಮಾ ಆಗಿರಲಿದ್ದು, ನಿರ್ದೇಶಕ ಅರುಣ್ ಸಾಕಷ್ಟು ತಯಾರಿಯೊಂದಿಗೆ ಸಿನಿಮಾ ಪ್ರಾರಂಭಿಸುತ್ತಿದ್ದಾರೆ.
ಚಿತ್ರದಲ್ಲಿ ಚಂದನ್ ಶೆಟ್ಟಿ ಜತೆ ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ್ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರಗಿ ಪ್ರಮುಖ ತಾರಾಗಣದಲ್ಲಿ ನಟಿಸಲಿದ್ದಾರೆ. ಉಳಿದಂತೆ ಚಿತ್ರದ ತಾಂತ್ರಿಕ ವರ್ಗದ ಬಗ್ಗೆ ಸಿನಿಮಾ ಟೈಟಲ್ ಬಿಡುಗಡೆಯಂದು ಮಾಹಿತಿ ನೀಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.