ಬೆಂಗಳೂರು: ಕನ್ನಡ ಸಾಹಿತ್ಯ ಲೋಕದಲ್ಲಿ, ‘ಎನ್ನೆಸ್ಸೆಲ್’ ಎಂದೇ ಮನೆಮಾತಾಗಿದ್ದ ಹಿರಿಯ ಕವಿ, ಸಾಹಿತಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ವಿಧಿವಶರಾಗಿದ್ದಾರೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಭಟ್ಟರು ಶನಿವಾರ (ಮಾರ್ಚ್ 06) ಬೆಳಗ್ಗೆ 4:45ರ ಸುಮಾರಿಗೆ ಕೊನೆಯುಸಿರೆಳೆದರು. ಬನಶಂಕರಿಯ ಅವರ ನಿವಾಸದಲ್ಲಿ ಬೆಳಗ್ಗೆ 10.30ರವರೆಗೆ ಅಂತಿಮ ದರ್ಶನ ಪಡೆದುಕೊಳ್ಳಬಹುದೆಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ.
ಭಟ್ಟರು 1936ರ ಅಕ್ಟೋಬರ್ 29ರಂದು ಶಿವಮೊಗ್ಗದಲ್ಲಿ ಜನಿಸಿದರು. ಇವರ ತಂದೆ ಶಿವರಾಮಭಟ್ಟ, ತಾಯಿ ಮೂಕಾಂಬಿಕೆ. ಎಂಎ ಪದವಿ ಪಡೆದ ಬಳಿಕ ಭಾಷಾಶಾಸ್ತ್ರ ಸಂಶೋಧಕರಾಗಿ ಎರಡು ವರ್ಷ ಕೆಲಸ ಮಾಡಿದ ಬಳಿಕ ಕಾಲೇಜಿನಲ್ಲಿ ಪ್ರಾಧ್ಯಪಕರಾಗಿ ಸೇವೆ ಆರಂಭಿಸಿದರು.
ಎನ್ನೆಸ್ಸೆಲ್ ಕನ್ನಡ ಸಾಹಿತ್ಯದ ಅಗ್ರಮಾನ್ಯ ಕವಿ, ಜನಪ್ರಿಯ ಪ್ರಧ್ಯಾಪಕರು. ಇವರು ಕನ್ನಡ-ಸಂಸ್ಕೃತ-ಇಂಗ್ಲೀಷ್ ಭಾಷೆಗಳಲ್ಲಿ ಕೃತಿರಚನೆ ಮಾಡಿದ್ದಾರೆ. ಎಲಿಯಟ್ಸ್, ಷೇಕ್ಸ್ಪಿಯರ್ ಕಾವ್ಯಗಳನ್ನು ಕನ್ನಡಕ್ಕೆ ಅನುವಾದಿಸಿದರು. “ಹೊರಳು ದಾರಿಯಲ್ಲಿ ಕಾವ್ಯ” ಈ ‘ವಿಮರ್ಶಾಗ್ರಂಥ’ಕ್ಕೆ 1974ರಲ್ಲಿ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಲಭಿಸಿದೆ.
ನಾಲ್ಕುಬಾರಿ ಅಮೆರಿಕದಲ್ಲಿ ವಿಶೇಷ ಆಹ್ವಾನಿತರಾಗಿದ್ದರು. ಅವರು ಕೊಟ್ಟ ಉಪನ್ಯಾಸಗಳ ಸಂಖ್ಯೆ 80. ನ್ಯೂಯಾರ್ಕ್, ನ್ಯೂಜರ್ಸಿ, ಶಿಕಾಗೊ, ಲಾಸ್ ಎಂಜಲೀಸ್, ಸ್ಯಾನ್ ಫ್ರಾನ್ಸಿಸ್ಕೋ ಮುಂತಾದ ನಗರಗಳಲ್ಲಿ ಭಟ್ಟರು ಮನೆಮಾತಾಗಿದ್ದಾರೆ.
ಕರೊನಾಗೆ ನಲುಗಿದ ಆರ್ಥಿಕತೆ: ಕೇಂದ್ರದ ಆದಾಯಕ್ಕೆ ಬರೆ, ರಾಜ್ಯಕ್ಕೆ ಹೊರೆ!