More

    ಕನ್ನಡ, ಕನ್ನಡಿಗ, ಕರ್ನಾಟಕ ಸುವರ್ಣ ಪಥ: ರಾಜ್ಯೋತ್ಸವ ಪ್ರಯುಕ್ತ ವಿಜಯವಾಣಿ ಸಂವಾದ

    ಶಿಕ್ಷಣ ಕ್ಷೇತ್ರ ಸುಧಾರಣೆ | ತಂತ್ರಾಂಶದಂತೆ ಯಂತ್ರಾಂಶಕ್ಕೆ ಆದ್ಯತೆ | ಪ್ರವಾಸೋದ್ಯಮಕ್ಕೆ ಒತ್ತು 
    ಕನ್ನಡ ಕಲಿಕೆಗೆ ಜಾಗೃತಿ | ಕನ್ನಡ ಕೃತಿಗಳ ಜಾಗತೀಕರಣ | ಬ್ರ್ಯಾಂಡ್ ಕರ್ನಾಟಕಕ್ಕೆ ದಿಕ್ಸೂಚಿ
    ‘ಭಾಷೆ, ಬದುಕು ಹಾಗೂ ಭಾವನೆಗಳು ಒಂದಾದಾಗ ತಾಯ್ನುಡಿಯ ಹಿರಿಮೆ ಹಾಗೂ ನಮ್ಮತನದ ಗರಿಮೆ ಜಗದಗಲ ಹರಡಲು ಸಾಧ್ಯವಿದೆ. ಇದು, ಕರ್ನಾಟಕ ನಾಮಕರಣ ಸುವರ್ಣ ಸಡಗರದ ಸಂಕಲ್ಪವಾಗಬೇಕು. ಕನ್ನಡ, ಕರ್ನಾಟಕ ಹಾಗೂ ಕನ್ನಡಿಗರಿಗೆ ಪಥದರ್ಶಿಯಾಗಬೇಕು’ ಎಂದು ಅರ್ಥಶಾಸ್ತ್ರಜ್ಞ ಪೊ›. ರಾಜೀವ್​ಗೌಡ, ಸಿನಿ ದಿಗ್ದರ್ಶಕ ಪಿ. ಶೇಷಾದ್ರಿ ಹಾಗೂ ಕಥೆಗಾರ ವಸುಧೇಂದ್ರ ಅವರು ವಿಜಯವಾಣಿ ಆಯೋಜಿಸಿದ್ದ ಕರ್ನಾಟಕ ಸುವಣೋತ್ಸವ ಸಂವಾದದಲ್ಲಿ ತಮ್ಮ ಒಡಲಾಳವನ್ನು ಬಿಚ್ಚಿಟ್ಟರು.

    ಬೆಂಗಳೂರು: ಕನ್ನಡದ ಕಿಚ್ಚು ಅನ್ಯ ಭಾಷೆ, ದೇಶದ ಜನರ ಬದುಕು ಸುಡುವ ಬೆಂಕಿಯಾಗಬಾರದು, ಬೆಳಗುವ ದೀಪವಾಗಬೇಕು. ಅನ್ಯರಿಗೂ ಪರಿಚಯಿಸಿ, ಅನ್ನದ ಮಾರ್ಗಕ್ಕೆ ಕನ್ನಡ ಕಲಿಕೆ ಅನಿವಾರ್ಯತೆ ಸೃಷ್ಟಿಸುವ ಕೈದೀವಿಗೆಯಾಗಬೇಕು. ಪರಸ್ಪರ ಸಹಭಾಗಿತ್ವದೊಂದಿಗೆ ತಾಯ್ನಾಡು, ತಾಯ್ನುಡಿ ಸಮೃದ್ಧ ಗೊಳಿಸುವ ಕೆಚ್ಚು ಮೈಗೂಡಿಸಿಕೊಳ್ಳಬೇಕು ಎಂದು ಮೂರೂ ತಜ್ಞರು ಹುರಿದುಂಬಿಸಿದರು.

    ಕರ್ನಾಟಕ ರಾಜ್ಯೋತ್ಸವ ಹಾಗೂ ಕರ್ನಾಟಕ ಹೆಸರು ನಾಮಕರಣದ ಸುವರ್ಣ ಮಹೋತ್ಸವ ನಿಮಿತ್ತ ಸಂವಾದದಲ್ಲಿ, ಹಿಂದೇನಾಯಿತು ಎಂದು ಕೆದಕುವ ಬದಲು ಮುಂದೇನಾಗಬೇಕು ಎಂಬುದಕ್ಕೆ ಪ್ರೊ.ರಾಜೀವ್ ಗೌಡ, ಪಿ. ಶೇಷಾದ್ರಿ ಹಾಗೂ ವಸುಧೇಂದ್ರ ದಿಕ್ಸೂಚಿ ಹಾಕಿಕೊಟ್ಟರು.

    ಮಾಗೋಪಾಯಗಳಿಗೆ ಅಡಿಪಾಯ: ಇಂಗ್ಲಿಷ್ ಪಾರಮ್ಯ, ಆರ್ಥಿಕತೆ ಪ್ರಾಧಾನ್ಯದ ಬದುಕು, ತಂತ್ರಜ್ಞಾನದ ಕ್ರಾಂತಿ ಯುಗದಲ್ಲಿ ಯಾರೋ ಬಂದು ನಮ್ಮ ಭಾಷೆ, ನಮ್ಮತನವನ್ನು ಉದ್ಧರಿಸುತ್ತಾರೆ ಎಂದು ಕಾಯುತ್ತಾ ಕುಳಿತರಾಗುವುದಿಲ್ಲ. ನಮ್ಮ ಭಾಷೆ, ನಮ್ಮ ಬದುಕು, ನಮ್ಮತನದ ಏಳಿಗೆ ನಮ್ಮ ಕೈಯ್ಯಲ್ಲೇ ಇದೆ. ವೈಯಕ್ತಿಕ ಆಸಕ್ತಿ, ಶ್ರಮಕ್ಕೆ ಸರ್ಕಾರ ಮತ್ತು ಸಂಘ-ಸಂಸ್ಥೆಗಳು ಒತ್ತಾಸೆಯಾಗಿ ನಿಂತರೆ ಬದಲಾದ ಪರಿಸ್ಥಿತಿಗೆ ತಕ್ಕಂತೆ ಕನ್ನಡ ಜಾಗತಿಕವಾಗಿ ಅನ್ನದ ಭಾಷೆಯಾಗುತ್ತದೆ, ಕರ್ನಾಟಕ ಭವ್ಯ ನೆಲೆಯಾಗುತ್ತದೆ.

    ಪ್ರತಿಯೊಬ್ಬ ಕನ್ನಡಿಗ ಹೆಮ್ಮೆಯಿಂದ ತಲೆ ಎತ್ತಿ ನಿಲ್ಲುವಂತಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಭಾಷೆ ಕಲಿಕೆ ವಿಷಯದಲ್ಲಿ ಫ್ರಾನ್ಸ್​ನವರ ವ್ಯಾಮೋಹ, ತಂತ್ರಜ್ಞಾನ ಸಂಶೋಧನೆಯಲ್ಲಿ ಚೀನಾದವರ ಛಲ, ಹೊಸ ಆವಿಷ್ಕಾರಗಳನ್ನು ದುಡಿಸಿಕೊಳ್ಳುವಲ್ಲಿ ಜಪಾನ್​ನವರ ಬುದ್ಧಿವಂತಿಕೆ ಮಾದರಿಯಾದರೆ ಕರ್ನಾಟಕದ ನಿಸರ್ಗ ಮತ್ತು ಪ್ರತಿಭಾನ್ವಿತ ಮಾನವ ಸಂಪತ್ತು ಸದ್ವಿನಿಯೋಗವಾಗಲಿದೆ. ಕನ್ನಡ ಭಾಷೆ, ಪರಂಪರೆ, ಸಂಸ್ಕೃತಿಯ ಸಿರಿವಂತಿಕೆಯ ಮೇಲೆ ಬದುಕು ಕಟ್ಟಿಕೊಳ್ಳಲು ಏನೆಲ್ಲ ಅವಶ್ಯ ಮತ್ತು ಅನಿವಾರ್ಯವೆಂಬ ಮಾಗೋಪಾಯ ಅನುಷ್ಠಾನಕ್ಕೆ ಸಾಮ, ಬೇಧ, ದಂಡೋಪಾಯಗಳು ಮುಖ್ಯ. ಹಾಗೆಯೇ ಕನ್ನಡ, ಕರ್ನಾಟಕ ಗಟ್ಟಿ ನೆಲೆಗಟ್ಟಾಗುವುದಕ್ಕೆ ಸರ್ಕಾರ, ಸಂಘ-ಸಂಸ್ಥೆ, ಪ್ರತಿಯೊಬ್ಬ ಕನ್ನಡಿಗ ಉತ್ತರದಾಯಿ, ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ರಾಯಭಾರಿ ಎನ್ನುವುದು ಪ್ರೊ.ರಾಜೀವ್ ಗೌಡ, ಪಿ. ಶೇಷಾದ್ರಿ ಮತ್ತು ವಸುಧೇಂದ್ರ ಜತೆಗಿನ ಸಂವಾದದ ಸಾರಾಂಶ.

    ಬೆಂಗಳೂರು ಕೇಂದ್ರಿತ ಜಾಗತಿಕ ಬ್ರ್ಯಾಂಡ್​ ವಿಸ್ತರಿಸಿ ಬ್ರ್ಯಾಂಡ್​ ಕರ್ನಾಟಕ ರೂಪುಗೊಳ್ಳಬೇಕು. ಈ ದಿಸೆಯಲ್ಲಿ ಲಭ್ಯ ವಿಪುಲ ಅವಕಾಶಗಳ ಬಳಕೆಗೆ ಸರ್ಕಾರ, ಸಮುದಾಯ ಹಾಗೂ ಜನಸಾಮಾನ್ಯರ ಸಹಭಾಗಿತ್ವ ಅಗತ್ಯ. ಏನಾದರೂ ಸಾಧಿಸಬಲ್ಲನೆಂಬ ಯುವಶಕ್ತಿ ಆತ್ಮವಿಶ್ವಾಸ ವರದಾನವಾಗಲಿದೆ.
    | ಪ್ರೊ. ರಾಜೀವ್ ಗೌಡ, ರಾಜ್ಯ ಪರಿವರ್ತನಾ ಸಂಸ್ಥೆ ಉಪಾಧ್ಯಕ್ಷ

    ಕನ್ನಡಿಗರು ಮನಸ್ಸು ಮಾಡಿದರೆ ಕರ್ನಾಟಕದಲ್ಲಿ ಕನ್ನಡ ವಾತಾವರಣ ಸೃಷ್ಟಿ ಅಸಾಧ್ಯವೇನಲ್ಲ. ಭದ್ರ ಅಡಿಪಾಯಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಪ್ರಧಾನವಾಗಿದೆ. ಹೊರಗಿನವರಿಗೆ ಕನ್ನಡ ಕಲಿಕೆ ಕಡ್ಡಾಯ ಕಾಯ್ದೆ ಜಾರಿಗೊಳಿಸಬೇಕು. ನಾಡಿನ ಜನರು ಔದಾರ್ಯದ ಜತೆಗೆ ಅಭಿಮಾನ ಮರೆಯಬಾರದು.
    | ಪಿ. ಶೇಷಾದ್ರಿ, ಸಿನಿಮಾ ನಿರ್ದೇಶಕ

    ನಮ್ಮ ಭಾಷೆ ನಮ್ಮ ಅಸ್ಮಿತೆ ಎಂದು ನಾಲ್ಕು ಗೋಡೆ ಮಧ್ಯೆ ಬಂಧಿಯಾಗಿಟ್ಟರೆ ಭಾಷೆ, ಭಾಷಿಕರು ಬೆಳೆಯಲಾರರು. ಕನ್ನಡ ಗಡಿ ದಾಟಬೇಕು, ಗಡಿಯಾಚೆಯದು ಕನ್ನಡಕ್ಕೆ ಬರಬೇಕು. ಅಂದಾಗ ಮಾತ್ರ ಕನ್ನಡ ಭಾಷೆ ಮತ್ತು ಕನ್ನಡಿಗರ ಬದುಕು ಸಮೃದ್ಧವಾಗುತ್ತದೆ. ಎಲ್ಲರನ್ನೂ ಒಳಗೊಳ್ಳುವಿಕೆ ಮುಖ್ಯ.
    | ವಸುಧೇಂದ್ರ, ಕಥೆಗಾರ

    ಮುಖ್ಯಾಂಶಗಳು

    • ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಸುಧಾರಣೆ ತುರ್ತು ಅಗತ್ಯ. ಕನ್ನಡ ಕಲಿಕೆಗೆ ಸೀಮಿತವಲ್ಲ, ಸುಸ್ಥಿರ ಬದುಕು, ಬದಲಾದ ಪರಿಸ್ಥಿತಿಗೆ ತಕ್ಕಂತೆ ಜೀವನ ಸಾಧ್ಯವೆಂದು ಖಾತರಿಪಡಿಸಬೇಕು.
    • ಬೆಂಗಳೂರಿನಾಚೆಗೂ ಕರ್ನಾಟಕ ಸಂಪದ್ಭರಿತವೆಂದು ಪರಿಚಯಿಸಲು ಪ್ರವಾಸೋದ್ಯಮ ಕ್ಷೇತ್ರಕ್ಕೆ ಒತ್ತು. ಮೂಲ ಸವಲತ್ತು ಸೇರಿ ಆತಿಥ್ಯ ವಲಯ, ಸಂಪರ್ಕ ಜಾಲ ಮೇಲ್ದರ್ಜೆಗೇರಿಸಬೇಕು.
    • ತಂತ್ರಾಂಶದಂತೆ ಯಂತ್ರಾಂಶದಲ್ಲೂ ಮೇಲುಗೈ ಸಾಧಿಸಲು ಹೆಚ್ಚೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜಕ ಕ್ರಮಗಳು, ಕೌಶಲಪೂರ್ಣ ಮಾನವ ಸಂಪನ್ಮೂಲ ಸೃಜನೆಗೆ ಆದ್ಯತೆ
    • ತಂತ್ರಜ್ಞಾನವನ್ನು ಕನ್ನಡಕ್ಕೂ ಒಗ್ಗಿಸಿ ಪಳಗಿಸುವ ಪ್ರಯತ್ನ ಸಾಲದು. ಈ ನಿಟ್ಟಿನಲ್ಲಿ ಆಸಕ್ತರನ್ನು ಪ್ರೋತ್ಸಾಹಿಸಲು ಸರ್ಕಾರ ಸ್ಪಷ್ಟ ನೀತಿ ಜಾರಿಗೆ ತರಬೇಕು.
    • ಬೇರೆ ದೇಶದವರಿಗೆ ಕನ್ನಡ, ಕರ್ನಾಟಕ ಪರಿಚಯಿಸಬೇಕು. ವಲಸಿಗರಿಗೆ ಕನ್ನಡ ಕಲಿಕೆ ಕಡ್ಡಾಯ ಕಾನೂನು ಜಾರಿ, ಕರ್ನಾಟಕದಲ್ಲಿ ಬದುಕು ಕಟ್ಟಿಕೊಳ್ಳಲು ಕನ್ನಡ ಅನಿವಾರ್ಯತೆ ಸೃಷ್ಟಿಸಬೇಕು.
    • ತಮಿಳುನಾಡು ಮಾದರಿಯಲ್ಲಿ ಕನ್ನಡ ಸಾಹಿತ್ಯವನ್ನು ಬೇರೆ ಭಾಷೆಗಳಿಗೆ ಅನುವಾದಿಸಲು ಸರ್ಕಾರ ಪ್ರೋತ್ಸಾಹಿಸಿ, ಪರಿಣತ ಖಾಸಗಿ ಸಂಸ್ಥೆ, ವ್ಯಕ್ತಿಗಳಿಗೆ ಅವಕಾಶ ನೀಡಬೇಕು.
    • ನ್ಯಾಯಾಂಗ, ವೈದ್ಯಕೀಯ, ತಾಂತ್ರಿಕ ವ್ಯಾಸಂಗದಲ್ಲಿ ಕನ್ನಡ ಬಳಕೆ ಸಾಧ್ಯವಾಗಿಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts