ನವದೆಹಲಿ: ಕೇಂದ್ರ ಸರ್ಕಾರದ ಜತೆಗಿನ ಮಾತುಕತೆ ಎರಡು ಬಾರಿ ವಿಫಲವಾಗಿದ್ದು, ದೆಹಲಿಗೆ ತೆರಳಬೇಕಿದ್ದ ರೈತರ ಟ್ರ್ಯಾಕ್ಟರ್ ಟ್ರಾಲಿಗಳು ಹರಿಯಾಣದಲ್ಲಿ ಸಿಲುಕಿಕೊಂಡಿವೆ. ಪಂಜಾಬ್-ಹರಿಯಾಣ ಗಡಿಯಲ್ಲಿ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ಮುಂದುವರೆದಿದೆ. ಅದರಲ್ಲೂ ಶಂಭು ಗಡಿಯಲ್ಲಿ ಎರಡೂ ದಿನ ರೈತರು ಹಾಗೂ ಪೊಲೀಸರ ನಡುವೆ ತೀವ್ರ ಘರ್ಷಣೆ ನಡೆಯುತ್ತಿದ್ದರೂ ಇದುವರೆಗೂ ರೈತರ ಟ್ರ್ಯಾಕ್ಟರ್ ಟ್ರಾಲಿಗಳು ದೆಹಲಿ ಕಡೆಗೆ ತೆರಳಲು ಪೊಲೀಸರು ಅವಕಾಶ ನೀಡಿಲ್ಲ.
ಇದೀಗ ಕೇಂದ್ರ ಸರ್ಕಾರ ಮತ್ತೊಮ್ಮೆ ರೈತರೊಂದಿಗೆ ಸೌಹಾರ್ದತೆ ಮಾತುಕತೆ ನಡೆಸುವ ಪ್ರಯತ್ನ ಆರಂಭಿಸಿದೆ. ಇದಕ್ಕಾಗಿ ಗುರುವಾರ ಸಂಜೆ ರೈತ ಮುಖಂಡರೊಂದಿಗೆ ಚಂಡೀಗಢದಲ್ಲಿ ಮೂರನೇ ಸುತ್ತಿನ ಮಾತುಕತೆ ಆಯೋಜಿಸಲಾಗಿದೆ. ಈ ಸಭೆ ಮುಗಿಯುವವರೆಗೂ ದೆಹಲಿಯತ್ತ ತೆರಳುವುದಿಲ್ಲ ಎಂದು ರೈತ ಮುಖಂಡರು ಘೋಷಿಸಿದ್ದು, ಗುರುವಾರ ಯಾವುದೇ ಗಲಾಟೆ ನಡೆಯುವುದಿಲ್ಲ ಎಂದು ನಿರೀಕ್ಷಿಸಲಾಗಿದೆ.
ಆದರೂ ದೆಹಲಿಯ ಎಲ್ಲಾ ಪ್ರವೇಶ ಕೇಂದ್ರಗಳನ್ನು ಇನ್ನೂ ಸೀಲ್ ಮಾಡಲಾಗಿದೆ, ಇದರಿಂದಾಗಿ ಗುರುವಾರವೂ ದೆಹಲಿ-ಎನ್ಸಿಆರ್ನಲ್ಲಿ ಟ್ರಾಫಿಕ್ ಜಾಮ್ಗೆ ಯಾವುದೇ ಪರಿಹಾರ ದೊರೆಯುವುದಿಲ್ಲ ಎಂಬುದು ಸ್ಪಷ್ಟವಾಗಿದೆ.
10 ಸ್ಥಳಗಳಲ್ಲಿ ರೈಲುಗಳ ನಿಲುಗಡೆ
ಪಂಜಾಬ್ನ 10 ಸ್ಥಳಗಳಲ್ಲಿ ರೈಲುಗಳನ್ನು ನಿಲ್ಲಿಸಲಾಗುವುದು ಎಂದು ರೈತ ಮುಖಂಡರು ಘೋಷಿಸಿದ್ದಾರೆ. ವರದಿಗಳ ಪ್ರಕಾರ ರೈಲು ಸಂಚಾರವನ್ನು ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ನಿರ್ಬಂಧಿಸಲಾಗುತ್ತದೆ. ಈ ಅವಧಿಯಲ್ಲಿ ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸಲಿದ್ದಾರೆ.
ರೈಲು ತಡೆ ಚಳವಳಿ
ಹರಿಯಾಣ ಗಡಿಯಲ್ಲಿ ಪಂಜಾಬ್ನ ರೈತರ ಗುಂಪುಗಳನ್ನು ತಡೆದು ಪೊಲೀಸರು ಅಶ್ರುವಾಯು ಶೆಲ್ಗಳನ್ನು ಹಾರಿಸಿರುವ ಬಗ್ಗೆ ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಪಂಜಾಬ್ನಲ್ಲಿ ಗುರುವಾರ 4 ಗಂಟೆಗಳ ಕಾಲ ರೈಲು ಸಂಚಾರ ನಿರ್ಬಂಧಿಸಲಾಗುವುದು ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಘೋಷಿಸಿದ್ದಾರೆ. ಈ ಚಳುವಳಿಯ ಸಂದರ್ಭದಲ್ಲಿ ಹರಿಯಾಣ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆಯಲಿವೆ.