ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರ ಜತೆಗೆ ಇಂದು ನಡೆಯಬೇಕಿದ್ದ ಕನ್ನಡ ಚಿತ್ರರಂಗದ ಸಭೆ ಮುಂದೂಡಲ್ಪಟ್ಟಿದೆ.
ಇದನ್ನೂ ಓದಿ: ಬಾಲಿವುಡ್ ತಾರೆಯರ ರಕ್ಷಾಬಂಧನ…
ಕರೊನಾ ಮತ್ತು ಲಾಕ್ಡೌನ್ನಿಂದ ಕಳೆದ ಕೆಲವು ತಿಂಗಳುಗಳಲ್ಲಿ ಕನ್ನಡ ಚಿತ್ರರಂಗ ಸಾಕಷ್ಟು ತತ್ತರಿಸಿದೆ. ಚಿತ್ರೀಕರಣ, ಚಿತ್ರಪ್ರದರ್ಶನ ಸ್ಥಗಿತಗೊಂಡಿದ್ದರೆ, ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ನಿರ್ಮಾಪಕರ ಸಂಘ ಸೇರಿದಂತೆ ಹಲವು ಸಂಘ-ಸಂಸ್ಥೆಗಳು, ಶಿವರಾಜಕುಮಾರ್ ಅವರಿಗೆ ಚಿತ್ರರಂಗದ ನಾಯಕತ್ವ ವಹಿಸಿಕೊಂಡು ಮುನ್ನಡೆಸಬೇಕು ಎಂದು ಮನವಿ ಮಾಡಿಕೊಂಡಿದ್ದವು.
ಶಿವರಾಜಕುಮಾರ್ ಸಹ ಇದಕ್ಕೆ ಒಪ್ಪಿ ಕಳೆದ ವಾರ ತಮ್ಮ ಮನೆಯಲ್ಲಿ ಸಭೆ ಕರೆದಿದ್ದರು. ಈ ಸಭೆಯಲ್ಲಿ ಕನ್ನಡದ ಪ್ರಮುಖ ನಟರು ಮತ್ತು ನಿರ್ಮಾಪಕರು ಭಾಗವಹಿಸಿದ್ದರು. ಈ ಸಭೆಯಲ್ಲಿ ಶಿವರಾಜಕುಮಾರ್, ರವಿಚಂದ್ರನ್, ಉಪೇಂದ್ರ, ರಮೇಶ್ ಅರವಿಂದ್, ಪುನೀತ್ ರಾಜಕುಮಾರ್, ಶ್ರೀಮುರಳಿ, ಯಶ್, ಗಣೇಶ್, ‘ದುನಿಯಾ’ ವಿಜಯ್, ನಿರ್ಮಾಪಕರಾದ ಕೆ.ಪಿ. ಶ್ರೀಕಾಂತ್, ಜಯಣ್ಣ, ಪುಷ್ಕರ್ ಮಲ್ಲಿಕಾರ್ಜುನಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.
ಈ ಸಭೆಯಲ್ಲಿ ಚಿತ್ರರಂಗದ ಪುನಶ್ಚೇತನದ ಬಗ್ಗೆ ಚರ್ಚೆ ನಡೆಯಿತು. ಆ ನಂತರ, ಚಿತ್ರರಂಗದ ಪರಿಸ್ಥಿತಿಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರಿಗೂ ವಿವರಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಸಚಿವರು, ಮುಖ್ಯಮಂತ್ರಿಗಳ ಜತೆಗೆ ಚಿತ್ರರಂಗದ ನಿಯೋಗದ ಸಭೆಯನ್ನು ಶೀಘ್ರದಲ್ಲೇ ಆಯೋಜಿಸುವುದಾಗಿ ಹೇಳಿದ್ದರು.
ಇದನ್ನೂ ಓದಿ: ಮತ್ತೆ ಸುತ್ತುತ್ತಿದೆ ‘ಕಾಲಚಕ್ರ’ … ‘ತರಗೆಲೆ ಸಂಸಾರ …’ ಹಾಡು ಬಿಡುಗಡೆ
ಅದರಂತೆ ಇಂದು ಮಹತ್ವದ ಸಭೆ ನಡೆಯಬೇಕಿತ್ತು. ಆದರೆ, ಮುಖ್ಯಮಂತ್ರಿಗಳ ಕರೊನಾ ಸೋಂಕು ದೃಢಪಟ್ಟಿರುವ ಮತ್ತು ಸದ್ಯ ಕ್ವಾರಂಟೈನ್ನಲ್ಲಿರುವ ಹಿನ್ನೆಲೆಯಲ್ಲಿ ಸಭೆ ಅನಿರ್ಧಿಷ್ಟಾವಧಿ ಮುಂದೂಡಲಾಗಿದೆ.
ನಿಮ್ಮ ಮೇಲಿದ್ದ ಗೌರವ ಕಡಿಮೆಯಾಯ್ತು … ‘ಬಿಗ್ ಬಿ’ಗೆ ಹಾಗಂತ ಆ ಮಹಿಳೆ ಹೇಳಿದ್ದ್ಯಾಕೆ?