ಕನಕಗಿರಿ: ತಾಲೂಕಿನ ಹಿರೇಖೇಡ ಗ್ರಾಮದ ಜಮೀನಿನಲ್ಲಿ ಕುರಿಹಟ್ಟಿ ಮೇಲೆ ಗುರುವಾರ ತಡರಾತ್ರಿ ಕಾಡು ಪ್ರಾಣಿಯೊಂದು ದಾಳಿ ಮಾಡಿ 11 ಕುರಿಮರಿ ಹಾಗೂ ಒಂದು ಮೇಕೆಯನ್ನು ಸಾಯಿಸಿದೆ.
ರಾತ್ರಿ ಗುಡುಗು ಸಿಡಿಲು ಸಹಿತ ಜೋರಾಗಿ ಮಳೆ ಸುರಿಯುತ್ತಿದ್ದರಿಂದ ಕುರಿಗಾಹಿ ತಿಮ್ಮಣ್ಣ ಉಚ್ಚಲಕುಂಟಿ ಹಾಗೂ ಕುಟುಂಬಸ್ಥರು ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಹಟ್ಟಿಗೆ ನುಗ್ಗಿದ ಕಾಡುಪ್ರಾಣಿ ಕುರಿಮರಿಗಳು ಹಾಗೂ ಮೇಕೆಯನ್ನು ಕೊಂದಿದೆ.
ದಾಳಿ ಮಾಡಿದ ಪ್ರಾಣಿ ತೋಳವೋ ಅಥವಾ ಕತ್ತೆ ಕಿರುಬವೋ ಎಂಬ ಗೊಂದಲ ಉಂಟಾಗಿದೆ. ತೋಳವಾದರೆ ಕುರಿ ಮರಿಯನ್ನು ಹೊತ್ತೊಯ್ಯುತ್ತದೆ. ಈ ದಾಳಿ ಕತ್ತೆ ಕಿರುಬ ಮಾಡಿರಬೇಕೆಂಬ ಸಂಶಯ ಅರಣ್ಯ ಇಲಾಖೆ ಸಿಬ್ಬಂದಿಯದಾಗಿದೆ. 11 ಕುರಿಗಳ ಜತೆಗೆ ಇನ್ನೂ ಮೂರು ಮರಿಗಳನ್ನು ಕಾಡುಪ್ರಾಣಿ ಹೊತ್ತೊಯ್ದಿದೆ ಎಂದು ಅಧಿಕಾರಿಗಳ ಬಳಿ ಕುರಿಗಾಹಿ ಅಳಲು ತೋಡಿಕೊಂಡಿದ್ದಾರೆ.
ಗ್ರಾಮ ಲೆಕ್ಕಾಧಿಕಾರಿ ಶಿವರಾಜ್, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಯ್ಯ, ಪಶುವೈದ್ಯ ಚನ್ನವೀರಪ್ಪ, ಅರಣ್ಯ ಇಲಾಖೆಯ ಅರಣ್ಯ ರಕ್ಷಕ ಶಿವಕುಮಾರ ವಾಲಿ, ಗ್ರಾಪಂ ಅಧ್ಯಕ್ಷ ಭೀಮನಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.