ಮುಂಬೈ: ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಮುಂಬೈ ಮಹಾನಗರ ಪಾಲಿಕೆ ನನ್ನ ಕಚೇರಿಯ ಒಂದು ಭಾಗವನ್ನು ನೆಲಸಮ ಮಾಡಿದ್ದು, ಇದರಿಂದ ನನಗೆ ಅವಮಾನ ಆಗಿದೆ ಎಂದಿರುವ ಬಾಲಿವುಡ್ ನಟಿ ಕಂಗನಾ ರಣಾವುತ್ ಇದೀಗ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.
ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರು ಗುರುವಾರ ಮುಂಬೈನಲ್ಲಿ ಕಂಗನಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಬಗ್ಗೆ ಮಾತನಾಡಿರುವ ಸಚಿವರು, ಸುಮಾರು 1 ಗಂಟೆ ಅವರೊಂದಿಗೆ ಮಾತನಾಡಿದೆ. ಮುಂಬೈನಲ್ಲಿ ಇರಲು ಯಾವುದೇ ಭಯವಿಟ್ಟುಕೊಳ್ಳಬೇಡಿ ಎಂದು ಹೇಳಿದ್ದೇನೆ. ಮುಂಬೈ ದೇಶದ ಆರ್ಥಿಕ ರಾಜಧಾನಿ ಮತ್ತು ಇಲ್ಲಿ ವಾಸಿಸಲು ಎಲ್ಲರಿಗೂ ಹಕ್ಕಿದೆ ಎಂದು ಸಚಿವರು, ನಮ್ಮ ಆರ್ಪಿಐ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ) ಪಕ್ಷವು ಸದಾ ನಿಮಗೆ ಬೆಂಬಲವಾಗಿರಲಿದೆ ಎಂದು ಹೇಳಿದರು.
ಕಚೇರಿ ನೆಲಸಮ ಘಟನೆಯಿಂದ ಕಂಗನಾಗೆ ಅವಮಾನ ಆಗಿದೆಯಂತೆ. ಕಳೆದ ಜನವರಿಯಲ್ಲಷ್ಟೇ ನಿರ್ಮಿಸಿದ ಅವಳ ಕಚೇರಿ ಇದೀಗ ಹಾನಿಯಾಗಿದೆ. ಕಟ್ಟಡ ನಿರ್ಮಾಣಕಾರರು 2-3 ಇಂಚು ಹೆಚ್ಚಿನ ಜಾಗದಲ್ಲಿ ನಿರ್ಮಿಸಿದ್ದಾರೆಂಬುದು ಅವರಿಗೆ ತಿಳಿದಿರಲಿಲ್ಲವಂತೆ. ಅಕ್ರಮ ಭಾಗವನ್ನು ಮಾತ್ರ ಬಿಎಂಸಿ ನೆಲಸಮ ಮಾಡಬೇಕಿತ್ತು. ಆದರೆ, ಕಚೇರಿ ಒಳಗಿನ ಗೋಡೆ ಮತ್ತು ಫರ್ನಿಚರ್ಗಳಿಗೂ ಹಾನಿಯಾಗಿವೆ. ಈ ಬಗ್ಗೆ ಕಂಗನಾ ನ್ಯಾಯಾಲಯ ಮೆಟ್ಟಿಲೇರಲಿದ್ದು, ಪರಿಹಾರಕ್ಕಾಗಿ ಬೇಡಿಕೆ ಇಡಲಿದ್ದಾರೆಂದರು.
ಬಿಎಂಸಿಯು ಕಂಗನಾಗೆ ತೀವ್ರ ಅನ್ಯಾಯ ಮಾಡಿದೆ ಮತ್ತು ಪ್ರತೀಕಾರದಿಂದ ವರ್ತಿಸಿದೆ ಎಂದು ನಾನು ಅವಳಿಗೆ ಹೇಳಿದೆ. ಯಾವುದೇ ಅನುಮೋದನೆಯನ್ನು ಪಡೆಯದೇ ಬಿಎಂಸಿ ತಂಡ ಬುಲ್ಡೋಜರ್ ಮತ್ತು ಎಕ್ಸ್ಕ್ಯಾವೆಟರ್ಸ್ ಉಪಯೋಗಿಸಿ ಕಟ್ಟಡವನ್ನು ಹಾನಿಗಳಿಸಿದೆ ಎಂದು ಸಚಿವರು ಆರೋಪಿಸಿದ್ದಾರೆ.
ಆದರೆ, ದಾಖಲಾತಿ ಸಲ್ಲಿಸಲು ನೀಡಿದ್ದ 24 ಗಂಟೆ ಅವಧಿಯಲ್ಲಿ ಕಂಗನಾ ವಿಫಲರಾಗಿದ್ದಾರೆ. ಹೀಗಾಗಿ ಕಚೇರಿಯ ಅಕ್ರಮ ಭಾಗವನ್ನು ಧ್ವಂಸ ಮಾಡಲಾಯಿತು ಎಂದು ಬಿಎಂಸಿ ಮೇಯರ್ ಸಮರ್ಥನೆ ನೀಡಿದ್ದಾರೆ. (ಏಜೆನ್ಸೀಸ್)
ಕಂಗನಾ ಕಚೇರಿ ನೆಲಸಮ ವಿರುದ್ಧ ನೆಟ್ಟಿಗರ ಆಕ್ರೋಶ: ಟ್ವಿಟರ್ನಲ್ಲಿ ಟ್ರೆಂಡ್ ಆದ ಹ್ಯಾಶ್ಟ್ಯಾಗ್ಗಳಿವು…