ನವದೆಹಲಿ: ಹಿಂದಿ ರಾಷ್ಟ್ರಭಾಷೆ ಎಂದು ಸುಳ್ಳೇ ಹೇಳಿ ಕನ್ನಡಿಗರು ಮಾತ್ರವಲ್ಲದೆ ದಕ್ಷಿಣ ಭಾರತದ ಇತರ ಭಾಷಿಕರಿಂದಲೂ ಬಾಲಿವುಡ್ ನಟ ಅಜಯ್ ದೇವಗನ್ ವ್ಯಾಪಕ ಟ್ರೋಲ್ಗೆ ಒಳಗಾದ ಬೆನ್ನಿಗೆ ನಟಿ ಕಂಗನಾ ರಣಾವತ್ ಕೂಡ ಹಿಂದಿ ರಾಷ್ಟ್ರಭಾಷೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹಿಂದಿ ರಾಷ್ಟ್ರಭಾಷೆ ಎನ್ನುವ ವಿಚಾರವಾಗಿ ನಟರಾದ ಅಜಯ್ ದೇವಗನ್ ಮತ್ತು ಕಿಚ್ಚ ಸುದೀಪ್ ಮಧ್ಯೆ ನಡೆದ ಟ್ವಿಟರ್ ವಾಗ್ವಾದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, ಅಜಯ್ ಹಿಂದಿ ರಾಷ್ಟ್ರಭಾಷೆ ಎಂದು ಹೇಳಿದ್ದರಲ್ಲಿ ತಪ್ಪೇನೂ ಇಲ್ಲ. ಪ್ರತಿಯೊಬ್ಬರಿಗೂ ಅವರ ಭಾಷೆ-ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುವ ಹಕ್ಕು ಇದೆ ಎಂದಿದ್ದಾರೆ.
ಹಾಗೆ ನೋಡಿದರೆ ಸಂಸ್ಕೃತ ನಮ್ಮ ರಾಷ್ಟ್ರಭಾಷೆ ಆಗಬೇಕಿತ್ತು. ಏಕೆಂದರೆ ಹಿಂದಿ, ಜರ್ಮನ್, ಇಂಗ್ಲಿಷ್, ಫ್ರೆಂಚ್ ಎಲ್ಲ ಭಾಷೆಗಳೂ ಅದರಿಂದಲೇ ಹೊಮ್ಮಿರುವಂಥವು. ನಮಗ್ಯಾಕೆ ಸಂಸ್ಕೃತ ರಾಷ್ಟ್ರಭಾಷೆ ಆಗಬಾರದು, ಯಾಕೆ ಅದನ್ನು ಶಾಲೆಗಳಲ್ಲಿ ಕಡ್ಡಾಯಗೊಳಿಸಿಲ್ಲ ಎಂದೂ ಆಕೆ ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲದೆ, ಹಿಂದಿ ರಾಷ್ಟ್ರಭಾಷೆ ಎನ್ನುವುದನ್ನು ನಿರಾಕರಿಸುವುದು ಸಂವಿಧಾನವನ್ನು ನಿರಾಕರಿಸಿದಂತೆ. ದೆಹಲಿ ದೇಶದ ರಾಜಧಾನಿ, ಇಲ್ಲಿ ಯಾವುದೇ ಕಾಯ್ದೆ, ಏನೇ ಮಾಡಿದರೂ ಅದನ್ನು ಹಿಂದಿಯಲ್ಲಿ ಮಾಡುತ್ತಾರೆ. ಹೀಗಾಗಿ ಹಿಂದಿಯನ್ನು ನಿರಾಕರಿಸುವುದು ದೆಹಲಿಯನ್ನು ಹಾಗೂ ಸಂವಿಧಾನವನ್ನು ನಿರಾಕರಿಸಿದಂತೆ ಎಂದು ಕಂಗನಾ ಅಭಿಪ್ರಾಯಪಟ್ಟಿದ್ದಾರೆ.
ಹಿಂದಿ ರಾಷ್ಟ್ರಭಾಷೆ ಎಂದು ಹೇಳಿಲ್ಲ, ಹೇಳಲ್ಲ; ಕನ್ನಡವೇ ನನ್ನ ಬಾಳಿನ ರಾಷ್ಟ್ರಭಾಷೆ: ಯೋಗರಾಜ್ ಭಟ್