ಕನಕಗಿರಿ: ಪಟ್ಟಣದ ತಹಸಿಲ್ ಕಚೇರಿಯಲ್ಲಿ ಬರಗಾಲ ನಿಮಿತ್ತ ಟಾಸ್ಕ್ಫೋರ್ಸ್ ಹಾಗೂ ಮಳೆಯಿಂದ ಹಾನಿಗೀಡಾದ ಆಸ್ತಿ ಪಾಸ್ತಿ, ಜಾನುವಾರು ಪಾಲೀಕರಿಗೆ ಪರಿಹಾರ ಕ್ರಮ ತೆಗೆದುಕೊಳ್ಳುವ ಕುರಿತು ತಹಸೀಲ್ದಾರ್ ವಿಶ್ವನಾಥ ಮುರುಡಿ, ತಾಪಂ ಇಒ ಎಲ್. ವೀರೇಂದ್ರಕುಮಾರ ನೇತೃತ್ವದಲ್ಲಿ ಗುರುವಾರ ಸಭೆ ನಡೆಯಿತು.
ತಾಲೂಕು ವ್ಯಾಪ್ತಿಯಲ್ಲಿ 6 ಕಡೆ ಕುಡಿವ ನೀರಿಗೆ ಅಭಾವವಾಗಿದ್ದು, ರೈತರ ಬೋರ್ವೆಲ್ಗಳನ್ನು ಬಾಡಿಗೆ ಪಡೆಯಲಾಗಿದೆ. ಇನ್ನೂ ಮೂರು ಕಡೆ ಬೇಡಿಕೆಯಿದ್ದು, ಮುಂಬರುವ ದಿನಗಳಲ್ಲಿ ಅಲ್ಲಿಯೂ ನೀರು ಒದಗಿಸಲು ಬೋರ್ವೆಲ್ಗಳನ್ನು ಬಾಡಿಗೆ ಪಡೆಯಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು.
ಮಳೆ ಹಾಗೂ ಬಿರುಗಾಳಿಯಿಂದಾಗಿ ಉಂಟಾದ ಹಾನಿ ಕುರಿತು ಚರ್ಚಿಸಲಾಯಿತು.
ಜೀರಾಳದಲ್ಲಿ 12 ಎಕರೆ ಬಾಳೆ ನಷ್ಟವಾಗಿದೆ, 2 ಜಾನುವಾರು ಸಾವನ್ನಪ್ಪಿವೆ. ಈಗಾಗಲೇ ದೇವಲಾಪುರ ಗ್ರಾಮದ ಮೃತ ಜಾನುವಾರು ವಾರಸುದಾರರಿಗೆ 37500 ರೂ. ಪರಿಹಾರ ನೀಡಲಾಗಿದ್ದು, ಬೆನಕನಾಳ ರೈತರಿಗೆ ಶೀಘ್ರವೇ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಮಳೆಯಿಂದಾಗಿ ನೀರು ಹರಿಯಲು ತೊಂದರೆಯಾಗದಂತೆ ಕ್ರಮ ವಹಿಸಲು ಪಿಡಿಒಗಳಿಗೆ ಸಭೆಯಲ್ಲಿ ಸೂಚಿಸಲಾಯಿತು. ಗಿಡ ಮರಗಳು ಬಿದ್ದಲ್ಲಿ ತೆರವುಗೊಳಿಸಲು ಅರಣ್ಯ ಇಲಾಖೆಗೆ, ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಆರೋಗ್ಯ ಇಲಾಖೆಗೆ ಸೂಚಿಸಲಾಯಿತು.
ಉಪತಹಸೀಲ್ದಾರ್ ವಿ.ಎಚ್. ಹೊರಪೇಟಿ, ಸಹಾಯಕ ಅಭಿಯಂತರ ವಿಜಯಕುಮಾರ, ಎಒ ಚನ್ನಬಸವ, ಕಂದಾಯ ನಿರೀಕ್ಷಕ ಬಷೀರುದ್ದೀನ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.