ಕನಕಗಿರಿ: ಸಕಾಲಕ್ಕೆ ಬಸ್ಗಳು ಬರುತ್ತಿಲ್ಲ, ಜತೆಗೆ ಬಸ್ಪಾಸ್ ಸಹ ಇಲ್ಲವೆಂದು ಬೇಸತ್ತ ವಿದ್ಯಾರ್ಥಿಗಳು ಇಲ್ಲಿನ ಬಸ್ ನಿಲ್ದಾಣದಲ್ಲಿ ಗಂಗಾವತಿಗೆ ತೆರಳುವ ಬಸ್ಗಳನ್ನು ತಡೆದು ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಆನ್ಲೈನ್ ಬಸ್ಪಾಸ್ ಇರುವುದರಿಂದ ಪಾಸ್ ದೊರೆಯುವುದು ಕಷ್ಟವಾಗುತ್ತಿದೆ. ದಿನವೂ ಹಣ ಕೊಟ್ಟು ಕಾಲೇಜಿಗೆ ಹೋಗಬೇಕಿದೆ. ಪಾಸ್ ಬರುವವರೆಗೂ ಉಚಿತ ಸಂಚಾರಕ್ಕೆ ಅವಕಾಶ ನೀಡಬೇಕು ಹಾಗೂ ಸಕಾಲಕ್ಕೆ ಬಸ್ಗಳನ್ನು ಓಡಿಸಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಆಗಮಿಸಿದ ಕ್ರೈಂ ಪಿಎಸ್ಐ ಖಾಸೀಂಸಾಬ್ ಅಕ್ರೊಳ್ಳಿ ಮತ್ತು ಎಎಸ್ಐ ಲಕ್ಕಪ್ಪ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ಡಿಪೋ ಮ್ಯಾನೇಜರ್ ಸಂಜೀವ್ಮೂರ್ತಿ ಜತೆ ಮೊಬೈಲ್ನಲ್ಲಿ ಚರ್ಚಿಸಿದರು. ಅಲ್ಲಿಂದ ಭರವಸೆ ದೊರೆತ ನಂತರ ವಿದ್ಯಾರ್ಥಿಗಳು ಸುಮ್ಮನಾದರು.
ಬುಧವಾರದಿಂದ ಕಾಲೇಜು ಸಮಯಕ್ಕೆ ಬಸ್ ಬಿಡಲು ಕ್ರಮ ಕೈಗೊಳ್ಳಲಾಗುವುದು. ಅರ್ಜಿ ಸಲ್ಲಿಸಿ ಒಂದು ವಾರದೊಳಗೆ ಪಾಸ್ಗೆ ಪಡೆಯಬಹುದು. ಹಳೆಯ ವಿದ್ಯಾರ್ಥಿಗಳು ಹಳೆಯ ಪಾಸ್ ಜತೆಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿಗೆ ದಾಖಲಾದ ರಸೀದಿ ತೋರಿಸಿ ಓಡಾಡಬಹುದು.
| ಸಂಜೀವ್ಮೂರ್ತಿ, ಡಿಪೋ ಮ್ಯಾನೇಜರ್, ಗಂಗಾವತಿ