ಕನಕಗಿರಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಹಿಳಾ ಹಾಗೂ ಮಕ್ಕಳ ತಜ್ಞ ವೈದ್ಯರನ್ನು ನೇಮಿಸುವಂತೆ ಆಗ್ರಹಿಸಿ ರಾಷ್ಟ್ರಮಾತ ಜೀಜಾಬಾಯಿ ಮಹಿಳಾ ಸಂಘ ಸಚಿವ ಶಿವರಾಜ ತಂಗಡಗಿಗೆ ಬರೆದ ಪತ್ರವನ್ನು ವೈದ್ಯ ಪವನ್ ಅರವಟಗಿಮಠಗೆ ಶುಕ್ರವಾರ ಮನವಿ ಸಲ್ಲಿಸಿತು.
ಸಂಘದ ಕಾರ್ಯದರ್ಶಿ ಲಕ್ಷ್ಮೀಬಾಯಿ ಮಹಿಪತಿ ಮಾತನಾಡಿ, ಪಟ್ಟಣವು ತಾಲೂಕು ಕೇಂದ್ರವಾಗಿದ್ದು, ಇಲ್ಲಿನ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಿತ್ಯ ನೂರಾರು ಮಹಿಳೆಯರು ಚಿಕಿತ್ಸೆಗೆಂದು ಬರುತ್ತಾರೆ. ಆದರೆ, ಆರೋಗ್ಯ ಕೇಂದ್ರದಲ್ಲಿ ಮಹಿಳಾ ವೈದ್ಯರಿಲ್ಲದೆ, ಸ್ತ್ರೀಯರಿಗೆ ಚಿಕಿತ್ಸೆ ಸರಿಯಾಗಿ ದೊರೆಯುತ್ತಿಲ್ಲ.
ಗರ್ಭಿಣಿಯರು ಹೆರಿಗೆಗೆ ಗಂಗಾವತಿ, ಕೊಪ್ಪಳ ನಗರ ಪ್ರದೇಶಗಳನ್ನೇ ಅವಲಂಬಿಸಿದ್ದು, ಬಡ ಹಾಗೂ ಮಧ್ಯಮವರ್ಗದವರಿಗೆ ಹೊರೆಯಾಗುತ್ತಿದೆ. ಅಲ್ಲದೇ, ಮಕ್ಕಳ ತಜ್ಞರಿಲ್ಲದೆ ಸಣ್ಣ ಪುಟ್ಟ ಕಾಯಿಲೆಗೂ ನಗರಗಳಿಗೆ ತೆರಳುವುದು ಕಷ್ಟಕರವಾಗಿದ್ದು, ಇಲಾಖೆ ಶೀಘ್ರವೇ ಪ್ರಸೂತಿ ಹಾಗೂ ಮಕ್ಕಳ ತಜ್ಞರನ್ನು ನೇಮಿಸಬೇಕು ಎಂದು ಆಗ್ರಹಿಸಿದರು. ಸದಸ್ಯರಾದ ಲಕ್ಷ್ಮೀ ಟಿ., ಕವಿತಾ, ಶಾಂತಮ್ಮ, ಸುಮಿತ್ರಮ್ಮ, ಲೀಲಾವತಿ, ಲಕ್ಷ್ಮೀ ಕೆ., ನಾಗರತ್ನಾ, ಸುಜಾತ ಇತರರಿದ್ದರು.