ಕಂಪ್ಲಿ: ಗ್ರಾಮಾಡಳಿತದಲ್ಲಿ ಬದಲಾವಣೆ ತರುವ ಹಿನ್ನೆಲೆಯಲ್ಲಿ ಅಭಿಪ್ರಾಯ ಸಂಗ್ರಹಿಸಲು ಗುರುವಾರ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಪಿ.ಎಂ.ವಿಜಯಭಾಸ್ಕರ್ ಹಾಗೂ ಅಧಿಕಾರಿಗಳು ತಾಲೂಕಿನ ರಾಮಸಾಗರ ಗ್ರಾಪಂ ಕಚೇರಿಗೆ ಭೇಟಿ ನೀಡಿ ಸಭೆ ನಡೆಸಿದರು.
ವಿಜಯಭಾಸ್ಕರ್ ಮಾತನಾಡಿ, ಶಾಲಾ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳಬೇಕು. ವೈಯಕ್ತಿಕ ಶೌಚಗೃಹ ನಿರ್ಮಿಸಲು ಸಾಧ್ಯವಿಲ್ಲದೆಡೆ ಗುಂಪು ವೈಯಕ್ತಿಕ ಶೌಚಗೃಹ ನಿರ್ಮಾಣ ಮಾಡಬೇಕು. ಗ್ರಾಪಂ ಸದಸ್ಯರು ಗ್ರಾಮದ ಅಭಿವೃದ್ಧಿಗೆ ಸೂಕ್ತ ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಮದಲ್ಲಿನ ಫಲಾನುಭವಿಗಳಲ್ಲಿ ಆಶ್ರಯ ಯೋಜನೆ ನಿವೇಶನಗಳ ಹಕ್ಕುಪತ್ರ ಇಲ್ಲದ ಕಾರಣ ನಮೂನೆ-9 ಪಡೆಯಲು ತೊಂದರೆಯಾಗುತ್ತಿದೆ. ಆದ್ದರಿಂದ ಗ್ರಾಮಠಾಣಕ್ಕೆ ಸೇರ್ಪಡೆಗೊಳಿಸಬೇಕು. ಹಳೆಯ ಗ್ರಾಮಠಾಣವನ್ನು ಸರ್ಕಾರದ ಆದೇಶದಂತೆ ಮರು ನಿಗದಿಗೊಳಿಸಬೇಕು. ಕೆಡಿಪಿ ಸಭೆಗೆ ಎ ಮತ್ತು ಬಿ ಗ್ರೂಪ್ ಅಧಿಕಾರಿಗಳು ಪಾಲ್ಗೊಳ್ಳದ ಬಗ್ಗೆ ಪಿಡಿಒ ಹನುಮಂತಪ್ಪ ಸಭೆಯ ಗಮನಕ್ಕೆ ತಂದರು.
ಪಂಚಾಯಿತಿ ಬೇಡಿಕೆ ರಿಜಿಸ್ಟರ್ನಲ್ಲಿ ಆಸ್ತಿ ಖಾತೆಗಳಿದ್ದರೂ ಸರ್ಕಾರದ ವಸತಿ ಸೌಲಭ್ಯ ದೊರಕುತ್ತಿಲ್ಲ. ಖಾತೆ ಹೊಂದಿದ ಆಸ್ತಿಗಳ ನಿವೇಶನಗಳಿಗೆ ವಸತಿ ಸೌಲಭ್ಯ ಕಲ್ಪಿಸುವಂತೆ ಗ್ರಾಪಂ ಮಾಜಿ ಅಧ್ಯಕ್ಷೆ ಆನೆ ಪಾರ್ವತಮ್ಮ ಒತ್ತಾಯಿಸಿದರು. ಗ್ರಾಪಂ ಮಕ್ಕಳ ಬಜೆಟ್ ರೂಸಬೇಕಿದ್ದು ಗ್ರಾಮಾಡಳಿತಕ್ಕೆ ಸಲಹೆ, ತರಬೇತಿ ನೀಡುವಲ್ಲಿ ಸರ್ಕಾರ ಮುಂದಾಗಬೇಕು. ಸುಸ್ಥಿರ ಅಭಿವೃದ್ಧಿ ಸಾಧಿಸಲು ಸಮಿತಿಗಳನ್ನು ರಚಿಸಿದ್ದು ಗುಣಮಟ್ಟದ ಚರ್ಚೆ ಮತ್ತು ತೀರ್ಮಾನ ಕೈಗೊಳ್ಳುವಂತೆ ನಿಗಾವಹಿಸಬೇಕು. ಬಾಲ್ಯ ವಿವಾಹ ತಡೆಯುವಲ್ಲಿ ಅಧಿಕಾರಿಗಳು ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುವಂತೆ ಸರ್ಕಾರ ಪೂರಕ ವಾತಾವರಣ ಏರ್ಪಡಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಎಚ್.ಸಿ.ರಾಘವೇಂದ್ರ ತಿಳಿಸಿದರು. ವಿಜಯಭಾಸ್ಕರ್, ಕೆಲ ವಿಷಯಗಳನ್ನು ಪುಸ್ತಕದಲ್ಲಿ ದಾಖಲಿಸಿಕೊಂಡರು.
ಗ್ರಾಪಂ ಅಧ್ಯಕ್ಷ ಶರಣಪ್ಪ ಬೊಮ್ಮಗಂಡಿ, ಉಪಾಧ್ಯಕ್ಷೆ ಯಲ್ಲಮ್ಮ, ಜಿಪಂ ಉಪ ಕಾರ್ಯದರ್ಶಿ ಬಿ.ವಿ.ಅಡವಿಮಠ, ಐಎಎಸ್ ಅಧಿಕಾರಿ ಪ್ರಸನ್ನಕುಮಾರ್ ಇತರರಿದ್ದರು.