ಕಂಪ್ಲಿ: ಅಲೆಮಾರಿಗಳು ಶಾಶ್ವತ ನೆಲೆ ಕಂಡುಕೊಳ್ಳಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕಿದೆ ಎಂದು ಕನ್ನಡ ವಿವಿ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಎಂ.ಮೇತ್ರಿ ಹೇಳಿದರು.
ಇಲ್ಲಿನ ಎಂ.ಡಿ.ಕ್ಯಾಂಪಿನ ಅಲೆಮಾರಿ ಗ್ರಂಥಾಲಯದಲ್ಲಿ ಸೋಮವಾರ ಬಳ್ಳಾರಿ ಗುಡಾರ ಗುಡಿಸಲು ನಿವಾಸಿಗಳ ಕಲ್ಯಾಣ ಸಂಘ ಹಾಗೂ ಕಂಪ್ಲಿಯ ಅಲೆಮಾರಿ ಗ್ರಂಥಾಲಯಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಲೆಮಾರಿಗಳ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಅಲೆಮಾರಿಗಳ ಕಾಲನಿಯಲ್ಲಿಯೇ ಅಲೆಮಾರಿ ಗ್ರಂಥಾಲಯ, ಟೆಂಟ್ ಶಾಲೆಗಳನ್ನು ತೆರೆಯಬೇಕು. ಅಲೆಮಾರಿಗಳ ಅಭಿವೃದ್ಧಿಗೆ ಸರ್ಕಾರ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು. ಅಲೆಮಾರಿಗಳ ಸಂಘಟನೆ, ಅಭಿವೃದ್ಧಿಗೆ ಶ್ರಮಿಸುತ್ತಿರುವ ಜಿ.ಮಾಧವರಾವ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವಲ್ಲಿ ಸರ್ಕಾರ ಮುಂದಾಗಬೇಕು ಎಂದರು.
ಕಲ್ಯಾಣ ಸಂಘದ ಜಿಲ್ಲಾಧ್ಯಕ್ಷ ಸಣ್ಣ ಮಾರೆಪ್ಪ ಮಾತನಾಡಿ, ಸಿಂಧೋಳ್ಳು, ಡೊಂಗ್ರಿ ಗರಾಸಿಯಾ ಸೇರಿ ಅಲೆಮಾರಿಗಳ ಅಭಿವೃದ್ಧಿಗಾಗಿ ಜಿ.ಮಾಧವರಾವ್ ಜೀವನ ಸವೆಸಿದ್ದಾರೆ ಎಂದರು.
ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಜಿ.ಮಾಧವರಾವ್, ಉತ್ತಮ ಗ್ರಂಥಪಾಲಕ ಪ್ರಶಸ್ತಿ ಪುರಸ್ಕೃತ ಶ್ರೀಧರಗಡ್ಡೆಯ ಅಲೆಮಾರಿ ಗ್ರಂಥಾಲಯದ ಗ್ರಂಥಪಾಲಕ ಡಿ.ಸುಂಕಣ್ಣ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಎಚ್.ಪಿ.ಶಿಕಾರಿರಾಮು, ಸಿ.ಡಿ.ಗಿರೀಶ್, ಸಿ.ಡಿ.ರಾಜಶೇಖರ, ರಾವುಲ್ ನಾಗಪ್ಪ, ಜಂಬಣ್ಣ, ಸಿಂಧೋಳ್ಳು ವೀರೇಶ್, ರಾಜಕುಮಾರ್, ಪಕ್ಕೀರಪ್ಪ, ಸಹಕಾರ ನಿವೃತ್ತ ಅಧಿಕಾರಿ, ಲಿಯಾಖತ್ ಅಲಿ ಇತರರಿದ್ದರು.