ಕಂಪ್ಲಿ: ಶಾಂತಿ, ನೆಮ್ಮದಿ, ಸುಖದ ಜೀವನ ಕೊಡುವ ಶಕ್ತಿ ದೇವರಿಗಿದೆ ಎಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜ ಪ್ರತಿಪಾದಿಸಿದರು. ತಾಲೂಕಿನ ದೇವಸಮುದ್ರ ಗ್ರಾಮದ ತುರುಮುಂದಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ಆಯೋಜಿಸಿದ್ದ ತುರುಮುಂದಿ ಬಸವೇಶ್ವರ ನೀಲಮ್ಮನವರ ವಿವಾಹ ಮಹೋತ್ಸವದಲ್ಲಿ 1724ನೇ ತುಲಾಭಾರ ಸೇವೆ ಸ್ವೀಕರಿಸಿ ಮಾತನಾಡಿದರು.
ಇಚ್ಛಿತ ಸಂಕಲ್ಪ, ಸತತ ಪ್ರಯತ್ನದೊಂದಿಗೆ ಅನನ್ಯ ಭಕ್ತಿಯಿಂದ ದೇವರನ್ನು ಪ್ರಾರ್ಥಿಸಬೇಕು. ತುಲಾಭಾರದ ಸೇವೆಯಲ್ಲಿ ಬರುವ ದವಸ, ಧಾನ್ಯ, ಹಣವನ್ನು ಅನಾಥಾಶ್ರಮದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಬಳಸಲಾಗುವುದು ಎಂದರು. ಚಿಕ್ಕೇನಕೊಪ್ಪ ಚನ್ನವೀರ ಶರಣರ ಮಠದ ಶಿವಶಾಂತವೀರ ಶಿವಶರಣರು ಮಾತನಾಡಿ, ಆಧುನಿಕತೆಯ ನೆಪದಲ್ಲಿ ಧಾರ್ಮಿಕ, ಆಧ್ಯಾತ್ಮ, ಧರ್ಮ ಪರಂಪರೆಯ ಆಚಾರ ವಿಚಾರಗಳನ್ನು ಕೈಬಿಡಬಾರದು ಎಂದರು.
ಜಾತ್ರಾ ಮಹೋತ್ಸವ ಅಂಗವಾಗಿ ತುರುಮುಂದಿ ಬಸವೇಶ್ವರ ನೀಲಮ್ಮನವರ ಗಂಗೆಸ್ಥಳ ಮಹೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ, ಅನ್ನಸಂತರ್ಪಣೆ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ತುರುಮುಂದಿ ಬಸವೇಶ್ವರ ದೇವಸ್ಥಾನ ಸಮಿತಿ ಪ್ರಮುಖರಾದ ಅಳ್ಳಳ್ಳಿ ವೀರೇಶ್, ಜಿ.ಲಿಂಗನಗೌಡ, ಜಿ.ಮಲ್ಲಿಗೌಡ, ಜಿ.ಮಲ್ಲಿಗೌಡ, ವೀರನಗೌಡ, ಗುಡ್ಡದ ಪಂಪಣ್ಣ, ವೀರೇಶಪ್ಪ, ಬಸವನಗೌಡ, ಗಣೇಶಗೌಡ ಇತರರಿದ್ದರು.