ಕಂಪ್ಲಿ: ಪಟ್ಟಣದ 12ನೇ ವಾರ್ಡ್ನ ಸರ್ವೇ ನಂಬರ್ 1349/ಎ/1 ಮತ್ತು 1350ರ ತಲಾ 50 ಸೆಂಟ್ಸ್ ಭೂಮಿಯಲ್ಲಿ ತಲಾತಲಾಂತರದಿಂದ ವಾಸಿಸುತ್ತಿರುವ ಕುಟುಂಬಗಳನ್ನು ಒಕ್ಕಲೆಬ್ಬಿಸದೆ ಪಟ್ಟಾ ಕೊಡಬೇಕು ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘ ಹಾಗೂ ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ವಿ.ಎಸ್. ಶಿವಶಂಕರ್ ಒತ್ತಾಯಿಸಿದರು.
ಇಲ್ಲಿನ ಅತಿಥಿಗೃಹ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸರ್ವೇ ನಂಬರ್ 1349/ಎ/1 ಮತ್ತು ಸರ್ವೇ ನಂಬರ್ 1350ರಲ್ಲಿ ವಾಸಿಸುವ ಕುಟುಂಬಗಳ ಸಂಘಟನಾ ಸಭೆಯ ನೇತೃತ್ವವಹಿಸಿ ಮಾತನಾಡಿದರು. ಸದರಿ ಸರ್ವೇ ನಂಬರಿನ ಭೂಮಿಯಲ್ಲಿ ಪರಿಶಿಷ್ಟರು, ಅಲ್ಪಸಂಖ್ಯಾತರು, ಹಿಂದುಳಿದ 150ಕ್ಕೂ ಹೆಚ್ಚು ಕಡು ಬಡ ಕುಟುಂಬಗಳು ಬಹುವರ್ಷಗಳಿಂದ ವಾಸಿಸುತ್ತಿವೆ. 1980ರಲ್ಲಿ ಸರ್ಕಾರಿ ಭೂಮಿ ಕೊಳಚೆಪ್ರದೇಶವಾಗಿತ್ತು. 2018ರಲ್ಲಿ ತಹಸೀಲ್ದಾರರು ಖಾಸಗಿಯವರಿಗೆ ಅಕ್ರಮವಾಗಿ ಮ್ಯೂಟೇಷನ್(ಹಕ್ಕು ಬದಲಾವಣೆ)ನೀಡಿದ್ದು, 2019ರ ಮೇ 5ರಂದು ಎಸಿ ನ್ಯಾಯಾಲಯದಲ್ಲಿ ತಡೆಯಾಗಿದೆ.
ಬಹುವರ್ಷಗಳಿಂದ ವಾಸಿಸುತ್ತಿರುವ ಕುಟುಂಬಗಳಿಗೆ ಪಟ್ಟಾ ಕೊಡುವಂತೆ ಅ.25ರಂದು ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಗೆ ಮನವಿ ಸಲ್ಲಿಸಲಾಗುವುದು. ಇದಕ್ಕೆ ಸೂಕ್ತ ಸ್ಪಂದನೆ ದೊರಕದಿದ್ದಲ್ಲಿ ಡಿಸಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಪ್ರಮುಖರಾದ ಬಂಡಿ ಬಸವರಾಜ್, ನಾಗರಾಜ, ಅನೀಲ್ಕುಮಾರ್, ವಲಿಸಾಬ್, ಮಾಬುಸಾಬ್, ಮಲ್ಲೆಪ, ಪವನ್ಕುಮಾರ್, ಫಾತೀಮಾ, ಕಣಿವೆಮ್ಮ, ಯಲ್ಲಮ್ಮ, ಜಯಮ್ಮ, ಸತ್ಯಮ್ಮ, ಹುಲಿಗೆಮ್ಮ ಇತರರಿದ್ದರು.