ಕಂಪ್ಲಿ: ಅರ್ಜಿ ಇತ್ಯರ್ಥಗೊಳಿಸದೆ ವಿಳಂಬ ನೀತಿ ಅನುಸರಿಸುವ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಸರ್ಕಾರಿ ಅಧಿಕಾರಿಗಳಿಗೆ ಬಳ್ಳಾರಿಯ ಕರ್ನಾಟಕ ಲೋಕಾಯುಕ್ತ ಅಧೀಕ್ಷಕ ಪುರುಷೋತ್ತಮ ಎಚ್ಚರಿಕೆ ನೀಡಿದರು.
ತಹಸಿಲ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಾರ್ವಜನಿಕ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಲೋಕಾಯುಕ್ತ ಅಧಿಕಾರಿಗಳು ಕಚೇರಿಗೆ ಭೇಟಿ ನೀಡಿದಾಗ ಅರ್ಜಿಗಳನ್ನು ಇಟ್ಟುಕೊಂಡ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕುಡಿವ ನೀರನ್ನು ಸಕಾಲದಲ್ಲಿ ಪ್ರಯೋಗಾಲಯಕ್ಕೆ ಕಳುಹಿಸಬೇಕು. 21ನೇ ವಾರ್ಡ್ ಹೌಸಿಂಗ್ಬೋರ್ಡ್ ಮತ್ತು 23ನೇ ವಾರ್ಡ್ ಸೋಮಪ್ಪ ಕಾಲನಿಯಲ್ಲಿ ಸೌಕರ್ಯಗಳ ದೂರು ಕುರಿತು ಪುರಸಭೆ ಸಿಬ್ಬಂದಿಯೊಂದಿಗೆ ಚರ್ಚಿಸಿದರು. ಚರಂಡಿ ಸ್ವಚ್ಛತೆಗೆ ಯಂತ್ರಗಳನ್ನು ಏಕೆ ಬಳಸುತ್ತಿಲ್ಲ ? 23 ವಾರ್ಡ್ಗಳ ಮಧ್ಯೆ 11 ಆರ್ಓ ಪ್ಲಾಂಟ್ಗಳಿದ್ದು ವಾರ್ಡ್ಗೊಂದು ಆರ್ಒ ಪ್ಲಾಂಟ್ ಯಾಕೆ ಸ್ಥಾಪಿಸಿಲ್ಲ ಎಂದು ಪ್ರಶ್ನಿಸಿದರು. ವಾರದೊಳಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು. ನಮೂನೆ-3 ಅರ್ಜಿಗಳ ಬಾಕಿ ಉಳಿಸಿಕೊಂಡ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದರು.
ನೀರು, ಚರಂಡಿ ಸೇರಿ ಮೂಲ ಸೌಕರ್ಯ ನೀಡುವಲ್ಲಿ ವಿಳಂಬ ಇಲ್ಲವೇ ತಾತ್ಸಾರ ಮಾಡುವುದು ಸರಿಯಲ್ಲ. ಬಳ್ಳಾರಿ-ಕಂಪ್ಲಿ ಮಧ್ಯೆ ಸಂಜೆ ನಾಲ್ಕರಿಂದ ರಾತ್ರಿ ಎಂಟರವರೆಗೆ ಪ್ರತಿ ಅರ್ಧ ಗಂಟೆಗೊಂದರಂತೆ ಬಸ್ ಓಡಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಲೋಕಾಯುಕ್ತ ಪಿಎಸ್ಐ ಮಹಮ್ಮದ್ ರಫಿಕ್ ಮಾತನಾಡಿ, ಪುರಸಭೆಗೆ ಸಂಬಂಧಿಸಿದ ನಾಲ್ಕು ಅರ್ಜಿ, ತಾಲೂಕು ಕಚೇರಿಗೆ ಸಂಬಂಧಿಸಿದ ಒಂದು ಸೇರಿ ಒಟ್ಟು ಐದು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ವಾಲ್ಮೀಕಿ ನಗರದಲ್ಲಿ 82ನಿವೇಶನಗಳಿದ್ದು 42 ಮಾತ್ರ ನೋಂದಣಿಯಾಗಿವೆ. ಉಳಿದ ನಿವೇಶನಗಳ ದಾಖಲೆಗಳನ್ನು ಪುರಸಭೆ ಸಕಾಲದಲ್ಲಿ ಒದಗಿಸುವಂತೆ ಸೂಚಿಸಿದರು. ಲೋಕಾಯುಕ್ತ ಡಿವೈಎಸ್ಪಿ ರಾಮರಾವ್, ತಹಸೀಲ್ದಾರ್ ಗೌಸಿಯಾಬೇಗಂ ಸೇರಿ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.