ಕಂಪ್ಲಿ: ಚಾಲಕನ ನಿಯಂತ್ರಣ ತಪ್ಪಿದ ಸರ್ಕಾರಿ ಬಸ್ ರಸ್ತೆ ಪಕ್ಕದ ಮಡಿಕಾಲುವೆಗೆ ವಾಲಿದ್ದು, ಸ್ವಲ್ಪದರಲ್ಲಿಯೇ ಪ್ರಯಾಣಿಕರು ಅಪಘಾತದಿಂದ ಪಾರಾಗಿದ್ದಾರೆ.
ಸೋಮವಾರ ಮಧ್ಯಾಹ್ನ ಕಂಪ್ಲಿಯಿಂದ ಹೊಸಪೇಟೆಯತ್ತ ತೆರಳುತ್ತಿದ್ದ ಕಲಬುರಗಿ-ಹಡಗಲಿ ಬಸ್ ರಾಮಸಾಗರ ಗ್ರಾಮದ ಹೊರವಲಯದಲ್ಲಿ ಚಲಿಸುವಾಗ ಇದ್ದಕ್ಕಿದ್ದಂತೆ ಸ್ಟೇರಿಂಗ್ ಲಾಕ್ ಆಗಿದೆ. ದಿಬ್ಬದಿಂದ ಕೆಳಗೆ ಇಳಿಯುವಾಗ ಬಸ್ಸಿನ ವೇಗ ಕಡಿಮೆ ಇದ್ದುದ್ದರಿಂದ ಸ್ಟೇರಿಂಗ್ ಲಾಕ್ ಆಗಿ ಚಾಲಕನ ನಿಯಂತ್ರಣಕ್ಕೆ ಸಿಗದೆ ಮಡಿಕಾಲುವೆಗಿಳಿದು ವಾಲಿ ನಿಂತಿದೆ. ಬಸ್ನಲ್ಲಿ ನಾಲ್ವರು ಮಕ್ಕಳು ಸೇರಿದಂತೆ 46 ಜನ ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಎಂದು ನಿರ್ವಾಹಕ ರೇವಪ್ಪ ತಿಳಿಸಿದರು.