ಕಂಪ್ಲಿ: ತಾಲೂಕಿನಲ್ಲಿ ಬೇಸಿಗೆಯಲ್ಲಿ ಮೇವು ಹಾಗೂ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಲು ತಹಸೀಲ್ದಾರ್ ನೇತೃತ್ವದಲ್ಲಿ ಶುಕ್ರವಾರ ಟಾಸ್ಕ್ಫೋರ್ಸ್ ಸಭೆ ನಡೆಯಿತು.
ಇದನ್ನೂ ಓದಿ: ಕೃಷ್ಣಾ ಹರಿದರೂ ನೀಗದ ನೀರಿನ ಕಷ್ಟ; ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಜಲದಾಹ ನೀರಾವರಿ ಪ್ರದೇಶದಲ್ಲೂ ಬರ
ತಹಸೀಲ್ದಾರ್ ಶಿವರಾಜ ಮಾತನಾಡಿ, ಬೇಸಿಗೆಯಲ್ಲಿ ನೀರಿನ ಬರ ಸೃಷ್ಟಿಯಾಗದಂತೆ ಕ್ರಮವಹಿಸಬೇಕಿದೆ. ನೀರು ಪೂರೈಕೆಗೆ ಸಮರ್ಪಕ ವಿದ್ಯುತ್ನ್ನು ಜೆಸ್ಕಾಂ ಪೂರೈಸಬೇಕು. ಈಗಿನಿಂದಲೇ ನೀರು ಮಿತವ್ಯಯ ಬಳಕೆ ಜಾಗೃತಿ ಮೂಡಿಸಿ. ಖಾಸಗಿ ಬೋರ್ವೆಲ್ಗಳ ಮಾಹಿತಿ ಸಂಗ್ರಹಿಸಿ ಅಗತ್ಯವಿದ್ದಲ್ಲಿ ಅವುಗಳಿಂದಲೇ ನೀರು ಸಂಗ್ರಹಿಸಿ ಪೂರೈಸಬೇಕು. ಬೋರ್ವೆಲ್ಗಳ ಸುಸ್ಥಿತಿ ಜತೆಗೆ ದಕ್ಷತೆ ಕಾಪಾಡಿ. ಕಲುಷಿತ ನೀರು ಪ್ರಕರಣಗಳಾಗದಂತೆ ಎಚ್ಚರಿಕೆವಹಿಸಿ. ಅಂತರರಾಜ್ಯಕ್ಕೆ ಮೇವು ರವಾನೆಯಾಗದಂತೆ ಕ್ರಮವಹಿಸಬೇಕು. ನೀರು, ಮೇವು ಮಾಹಿತಿ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರತಕ್ಕದ್ದು ಎಂದು ಸೂಚಿಸಿದರು.
ತಾಪಂ ಇಒ ಆರ್.ಕೆ.ಶ್ರೀಕುಮಾರ್ ಮಾತನಾಡಿ, ಬೇಸಿಗೆಯಲ್ಲಿ ಶಾಲೆಗಳ ಬೋರ್ನೀರನ್ನು ಗ್ರಾಮಸ್ಥರಿಗೆ ಪೂರೈಸಿ, ಬೋರ್ಗಳ ದುರಸ್ತಿಗೊಳಿಸಿ ಸುಸ್ಥಿತಿಯಲ್ಲಿಟ್ಟುಕೊಳ್ಳಿ. ನೀರು ಪೋಲು ತಡೆಯಿರಿ. ಬೇಸಿಗೆಯಲ್ಲಿ ನೀರಿನ ಬರ ನೀಗಿಸುವಲ್ಲಿ ಗ್ರಾಮಸ್ಥರ ಪಾತ್ರ ಕುರಿತು ಜಾಗೃತಿ ಮೂಡಿಸಬೇಕೆಂದರು.
ಪ್ರಾಯಶಃ ಮಾರ್ಚ್ ತಿಂಗಳಿಂದ ಅಂತರ್ಜಲ ಕುಸಿತವಾಗುವ ಸಂಭವವಿದೆ ಎನ್ನುವ ಅಂಶವ್ಯಕ್ತವಾಯಿತು.
ತಾಲೂಕಿನಾದ್ಯಂತ ಬೇಸಿಗೆಯಲ್ಲಿ ಸಮರ್ಪಕವಾಗಿ ಜನತೆಗೆ ನೀರು ಒದಗಿಸಲು ಸಾಧ್ಯವಿದೆಯೇ? ತೊಂದರೆಯಾಗುವುದಿದ್ದಲ್ಲಿ ಕೈಗೊಳ್ಳಬಹುದಾದ ಕ್ರಮಗಳೇನು? ನೀರು ಮೂಲಗಳ ಅಂಕಿಸಂಖ್ಯೆ ಸಂಗ್ರಹ ಮಾಡಲಾಗಿದೆಯೇ? ಮೇವು ಕೊರತೆಯಾಗದಂತೆ ಕ್ರಮಗಳೇನು ಎನ್ನುವ ವಿಷಯಗಳ ಬಗ್ಗೆ ಚರ್ಚೆಯಾಯಿತು. ಪಾಲ್ಗೊಂಡಿದ್ದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ನೀರು, ಮೇವು ಮೂಲಗಳ ಬಗ್ಗೆ ಮಾಹಿತಿ ನೀಡಿದರು.
ಸಿಒ ಕೆ.ದುರುಗಣ್ಣ, ಪಿಡಿಒ ಶ್ರೀೀಶೈಲಗೌಡ, ಪಶು, ಆರೋಗ್ಯ, ಜೆಸ್ಕಾಂ, ತೋಟಗಾರಿಕೆ ಸೇರಿ ನಾನಾ ಅಧಿಕಾರಿಗಳು ಪಾಲ್ಗೊಂಡಿದ್ದರು.