ಕಂಪ್ಲಿ: ಪರಿಣಾಮಕಾರಿಯಾಗಿ ಕೋವಿಡ್ ನಿಯಂತ್ರಿಸಲು ಪಟ್ಟಣದಲ್ಲಿ ಕರೊನಾ ಆರೈಕೆ ಕೇಂದ್ರ ಆರಂಭಿಸಲಾಗಿದೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಇಲ್ಲಿನ ಕಾಕತೀಯ ನಗರದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಗುರುವಾರ ಜಿಲ್ಲಾಡಳಿತ ತೆರೆದಿರುವ ಕರೊನಾ ಸೋಂಕಿತರ ಪ್ರಾಥಮಿಕ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಆನಂದ್ಸಿಂಗ್ ಸಹಕಾರದಿಂದ ಹೋಂ ಐಸೋಲೇಷನ್ನಲ್ಲಿರುವ ಸೋಂಕಿತರಿಗಾಗಿ 85 ಹಾಸಿಗೆಗಳ ಆರೈಕೆ ಕೇಂದ್ರ ಸ್ಥಾಪಿಸಿದೆ.
ಅಗತ್ಯಬಿದ್ದಲ್ಲಿ ಹೆಚ್ಚುವರಿ 50 ಬೆಡ್ ವ್ಯವಸ್ಥೆ ಕಲ್ಪಿಸಲಾಗುವುದು. ಸೋಂಕಿತರ ತುರ್ತು ಚಿಕಿತ್ಸೆಗಾಗಿ 20 ಆಕ್ಸಿಜನ್ ಕಾನ್ಸನ್ಟ್ರೇಟರ್ ಬಾಕ್ಸ್ಗಳನ್ನು ಅಳವಡಿಸಲಾಗುವುದು. ಇನ್ನೆರಡು ದಿನಗಳಲ್ಲಿ ಹೊಸ ಆಂಬುಲೆನ್ಸ್ ಸೌಲಭ್ಯ ಕೂಡ ದೊರಕಲಿದೆ. ಸೋಂಕಿತರಿಗಾಗಿ ಉಪಾಹಾರ, ಊಟದ ವ್ಯವಸ್ಥೆ ಮಾಡಲಾಗಿದೆ. ಹೋಂ ಐಸೋಲೇಷನ್ನಲ್ಲಿ ಇರುವವರು ಕೇಂದ್ರಕ್ಕೆ ಬರಬೇಕು. ಈಗಾಗಲೇ ಜಿಲ್ಲೆಯ ಕೆಲ ಮಕ್ಕಳಿಗೂ ಸೋಂಕು ಹರಡಿದ್ದು, ಪಾಲಕರು ಜಾಗೃತಿವಹಿಸಬೇಕು ಎಂದರು.
ವೈದ್ಯಾಧಿಕಾರಿ ರಾಧಿಕಾ ಮಾತನಾಡಿ, ಡಿ-ಗ್ರೂಪ್ ನೌಕರರ ಕೊರತೆಯಿದೆ. ಸಣ್ಣ ಪುಟ್ಟ ಸೌಲಭ್ಯ ಕಲ್ಪಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು. ತಕ್ಷಣ ಶಾಸಕರು, ಹಿರಿಯ ಅಧಿಕಾರಿಗಳೊಂದಿಗೆ ಕರೆ ಮಾಡಿ ಸೌಲಭ್ಯ ಕಲ್ಪಿಸಲು ಸೂಚಿಸಿದರು.