ಕಂಪ್ಲಿ: ಕಮ್ಮ ಸಮುದಾಯದವರು ಸಂಘಟಿತರಾಗುವ ಮೂಲಕ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಂಪ್ಲಿ ಫಿರ್ಕಾ ಕಮ್ಮವಾರಿ ಸಂಘದ ಅಧ್ಯಕ್ಷ ಸಾಯಿಬಾಬಾ ಹೇಳಿದರು.
ಇಲ್ಲಿನ ಕೆ.ಎಸ್.ಭವನದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ತುಳಸಿ ವಿವಾಹ, ಕಾರ್ತಿಕ ಮಾಸದ ವನಭೋಜನಾ, ಸಂಘಟನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಬೇಕು.
ಉನ್ನತ ಶಿಕ್ಷಣಗಳಿಸಿದಾಗ್ಯೂ ಮಕ್ಕಳು ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ಮಹಿಳೆಯರು ಸ್ವಉದ್ಯೋಗಗಳಲ್ಲಿ ತೊಡಗಿಕೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದರು.
ಮಹಿಳೆಯರಿಗೆ 18 ಬಗೆಯ ಮನರಂಜನೆ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಘದ ಪದಾಧಿಕಾರಿಗಳಾದ ನರಶೆಟ್ಟಿ ಕೊಂಡಯ್ಯ, ಪೋತರಾಜು ರಾಮಚಂದ್ರರಾವ್, ಪೋಲೂರು ಪ್ರಸಾದರಾವ್, ಕೆ.ಶ್ರೀನಿವಾಸರಾವ್, ಭಾಸ್ಕರರಾವ್, ಭಟ್ಟಪ್ರಸಾದ, ಬಾಲಕೃಷ್ಣ, ಪುರುಷೋತ್ತಮ, ಅಚ್ಯುತರಾಯವರ್ಮ, ಕಮ್ಮವಾರಿ ಶಾಲೆಯ ಮುಖ್ಯಶಿಕ್ಷಕ ಕೆ.ವಿಷ್ಣು ಇತರರಿದ್ದರು.