ರಾಣೆಬೆನ್ನೂರ: ಸಮಾಜದಲ್ಲಿ ಪರೋಪಕಾರ ಮಾಡುವರು ತಮ್ಮಗೆ ಅರಿವಿಲ್ಲದಂತೆ ಭಗವಂತನಿಗೆ ಪ್ರಿಯವಾಗಿರುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಜೀವನದಲ್ಲಿ ಪರೋಪಕಾರ ಮನೋಭಾವನೆ ರೂಡಿಸಿಕೊಳ್ಳಬೇಕು. ಅಂದಾಗ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹುಬ್ಬಳ್ಳಿ ನೀಲಕಂಠೇಶ್ವರ ಶ್ರೀಶೈಲಂ ಆದಿಪೀಠದ ಶ್ರೀ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ನೀಲಕಂಠೇಶ್ವರ ದೇವಸ್ಥಾನದಲ್ಲಿ ಕುರುಹಿನ ಶೆಟ್ಟಿ ಸೇವಾ ಸಮಾಜ, ಕಾಕಿ ಜನಸೇವಾ ಸಂಸ್ಥೆ, ಜೆಸಿಐ ಸಂಸ್ಥೆ ಹಾಗೂ ಜೇಸಿಸ್ ಕ್ಷೇಮಾಭಿವೃದ್ಧಿ ಕ್ರೆಡಿಟ್ ಕೋ-ಅಪ್ ಸೊಸೈಟಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ, ಪರಸ್ಪರ ಪ್ರೀತಿ ನಂಬಿಕೆಯೊಂದಿಗೆ ಜೀವನ ಸಾಗಿಸಬೇಕು. ಅಂದಾಗ ಮಾತ್ರ ಜೀವನ ಎಂಬ ಜಂಜಾಟದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ನವ ದಂಪತಿಗಳು ಮುಂದಿನ ದಿನಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಜತೆಗೆ ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದರು.
ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಇಂತಹ ಸಾಮೂಹಿಕ ವಿವಾಹ ಕಾರ್ಯಕ್ರಮದಿಂದ ಬಡವರ ಆರ್ಥಿಕ ಹೊರೆ ತಗ್ಗಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಸರಳ ವಿವಾಹಗಳಿಗೆ ಆದ್ಯತೆ ನೀಡುವುದು ಅಗತ್ಯವಾಗಿದೆ. ಬಡವರ ಅನುಕೂಲತೆಗೆ ಪ್ರತಿವರ್ಷ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುವ ಕಾಕಿ ಕುಟುಂಬ ಹಾಗೂ ಕುರುಹಿನಶೆಟ್ಟಿ ಸೇವಾ ಸಮಿತಿ ಕಾರ್ಯ ಮೆಚ್ಚುವಂತಹದಾಗಿದೆ ಎಂದರು.
ಶನೈಶ್ಚರ ಹಿರೇಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾಕಿ ಜನಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ನಗರಸಭೆ ಸದಸ್ಯ ಪ್ರಕಾಶ ಪೂಜಾರ, ಕುರುಹಿನಶೆಟ್ಟಿ ಸಮಾಜ ಅಧ್ಯಕ್ಷ ಹನುಮಂತಪ್ಪ ಅಮಾಸಿ, ಉಪಾಧ್ಯಕ್ಷ ಶಿವಾನಂದ ಸಾಲಗೇರಿ, ಪ್ರಮುಖರಾದ ಹನುಮಂತಪ್ಪ ಕಾಕಿ, ಹನುಮಂತಪ್ಪ ಕಾಕಿ, ರೂಪಾ ಕಾಕಿ, ಶೋಭಾ ಹೊಸಪೇಟೆ, ಕುಮಾರ ಶ್ಯಾವಿ, ಸಿದ್ದಪ್ಪ ಬೂದೂರ, ಶ್ರೀಧರ ಅಮಾಸಿ, ಗುಡದಯ್ಯ ಹಲಗೇರಿ, ವೆಂಕಟೇಶ ಕಾಕಿ ಮತ್ತಿತರರು ಉಪಸ್ಥಿತರಿದ್ದರು.