ಬೆಂಗಳೂರು:
ಲೋಕಸಭಾ ಚುನಾವಣೆ ಬಳಿಕ ಬೆಂಗಳೂರಿಗೆ ಮರಳಿರುವ ಸಚಿವರುಗಳು, ಕಡತ ವಿಲೇವಾರಿ ಕಡೆಗೆ ಗಮನ ಹರಿಸಿದ್ದಾರೆ.
ಕಳೆದ ಒಂದೂವರೆ ತಿಂಗಳಿಂದ ನಾನಾ ಕಾರಣಕ್ಕಾಗಿ ಬಾಕಿ ಇರುವ ಕಡತಗಳಲ್ಲಿ ಆಡಳಿತಾತ್ಮಕ ವಿಷಯಗಳ ಬಗ್ಗೆ ಇರುವ ಕಡತಗಳಿಗೆ ಆದ್ಯತೆ ನೀಡಿ ನಿರ್ಣಯ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಯಾವುದೇ ಪ್ರಮುಖ ನಿರ್ಣಯ ಮತ್ತು ಆದೇಶಗಳನ್ನು ಮಾಡುವುದನ್ನು ಹೊರತುಪಡಿಸಿ, ನೀತಿ ಸಂಹಿತೆ ವ್ಯಾಪ್ತಿಯೊಳಗೆ ಬರುವ ಅನೇಕ ಆಡಳಿತಾತ್ಮಕ ವಿಷಯಗಳಿಗೆ ಮಾತ್ರ ಗಮನ ಕೇಂದ್ರೀಕರಿಸಲಾಗಿದೆ.
ತಮ್ಮಕ್ವಾಟ್ರಸ್ ಮತ್ತು ಮನೆಗಳಿಗೆ ತಮ್ಮ ಆಪ್ತ ಸಹಾಯಕರ ಮೂಲಕ ಕಡತಗಳನ್ನು ತರಿಸಿಕೊಳ್ಳುತ್ತಿರುವ ಸಚಿವರುಗಳು ಅಲ್ಲಿಯೇ ಚರ್ಚೆ ನಡೆಸಿ ಸಂಬಂದಿಸಿದ ಅಧಿಕಾರಿಗಳಿಗೆ ಮೌಖಿಕವಾಗಿ ಸೂಚನೆಗಳನ್ನು ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೂ.7ಕ್ಕೆ ನೀತಿ ಸಂಹಿತೆ ಮುಗಿಯಲಿದ್ದು, ಬಳಿಕ ಅಧಿಕೃತವಾದ ಕಡತಗಳ ಮೇಲೆ ನಿರ್ಣಯ ತೆಗೆದುಕೊಂಡು ಆದೇಶ ಮಾಡಲು ಮುಂದಾಗಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.