ಬೆಂಗಳೂರು: ಚಿತ್ರನಟ ಕಬೀರ್ ಬೇಡಿ ಆತ್ಮಕಥನ ‘ಸ್ಟೋರಿಸ್ ಐ ಮಸ್ಟ್ ಟೆಲ್- ದಿ ಎಮೋಷನಲ್ ದಿ ಇಮೋಷನಲ್ ಲೈಪ್ ಆಫ್ ಆನ್ ಆ್ಯಕ್ಟರ್’ನಲ್ಲಿ ತಮ್ಮ ವಿರುದ್ಧ ಅವಹೇಳನ ಮಾಡಿರುವ ಹಿನ್ನೆಲೆ ಕೃತಿಯ ಪ್ರಕಟಣೆ ಮತ್ತು ಮಾರಾಟಕ್ಕೆ ನಿರ್ಬಂಧ ವಿಧಿಸಲು ಕೋರಿ ಕಬೀರ್ ಬೇಡಿ ಅವರ ಹಿರಿಯ ಸಹೋದರ ಟಿ.ಆರ್. ಬೇಡಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ. ವಿಚಾರಣಾ ನ್ಯಾಯಾಲಯ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದ್ದಕ್ಕೆ ಕಾರಣ ನೀಡಿದೆ. ಆ ಆದೇಶದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ವಿಚಾರಣಾ ನ್ಯಾಯಾಲಯ 2022ರ ಸೆ.27ರಂದು ಆದೇಶ ನೀಡಿದೆ. ಅದಾಗಿ 9 ತಿಂಗಳ ನಂತರ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. 2021ರಲ್ಲಿಯೇ ಪುಸ್ತಕ ಪ್ರಕಟಗೊಂಡು ಮಾರಾಟವಾಗಿದೆ. ಈ ಹಂತದಲ್ಲಿ ತಡೆ ನೀಡಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.
ಅರ್ಜಿದಾರರು ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ಕಬೀರ್ ಬೇಡಿ ಕೃತಿಯಲ್ಲಿ ತನ್ನ ವಿರುದ್ಧ ಅವಹೇಳನ ಮಾಡಿದ್ದು, ವಾರ್ಷಿಕ ಶೇ.24ರ ಬಡ್ಡಿಯಂತೆ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದರು. ಜತೆಗೆ, ತಮ್ಮ ವಿರುದ್ಧ ಕೃತಿಯಲ್ಲಿ ದಾಖಲಿಸಿರುವ ಅವಹೇಳನಕಾರಿ ಅಂಶಗಳನ್ನು ತೆಗೆದುಹಾಕುವಂತೆ ಕೃತಿಕಾರರು ಮತ್ತು ಪ್ರಕಾಶನ ಸಂಸ್ಥೆಗೆ (ವೆಸ್ಟ್ ಲ್ಯಾಂಡ್ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್) ಸೂಚನೆ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದ್ದರು. ಆದರೆ ವಿಚಾರಣಾ ನ್ಯಾಯಾಲಯ, ಪುಸ್ತಕ ಈಗಾಗಲೇ ಪ್ರಕಟಗೊಂಡು ಸಾಕಷ್ಟು ಸಂಖ್ಯೆಯ ಪ್ರತಿಗಳು ಮಾರಾಟವಾಗಿವೆ. ಈ ಹಂತದಲ್ಲಿ ತಡೆ ನೀಡಲಾಗದು ಎಂದಿದೆ.