ಚಿತ್ರದುರ್ಗ: ಐತಿಹಾಸಿಕ ಕೋಟೆನಾಡಿನ ಗತವೈಭವ ಸಾರಲು ಡಿಸೆಂಬರ್ ಅಂತ್ಯದೊಳಗೆ 3ರಿಂದ 5 ದಿನ ದುರ್ಗೋತ್ಸವ ಕಾರ್ಯಕ್ರಮ ನಡೆಯುವುದು ಖಚಿತ ಎಂದು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೋಮವಾರ ಮಾತನಾಡಿದ ಅವರು, ಈ ಸಂಬಂಧ ಸಚಿವರ ಜತೆ ಚರ್ಚಿಸಿದ್ದು, ಸಮ್ಮತಿಸಿದ್ದಾರೆ. ಅ. 28ರಂದು ಕೋಟೆ ಆವರಣದೊಳಗೆ ಪೂರ್ವಭಾವಿಯಾಗಿ ಕಾರ್ಯಕ್ರಮವೊಂದು ನಡೆಯಲಿದೆ. ದುರ್ಗೋತ್ಸವಕ್ಕೆ ಕೇಂದ್ರ ಪ್ರವಾಸೋದ್ಯಮ ಸಚಿವರನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.
ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿದ್ದಾಗ ದುರ್ಗೋತ್ಸವ ನಡೆದಿತ್ತು. ಈ ಬಾರಿ ಬಿಜೆಪಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಭದ್ರಾ ಮೇಲ್ದಂಡೆ ಯೋಜನೆ, ನೇರ ರೈಲು ಮಾರ್ಗ, 83 ವರ್ಷಗಳ ಬಳಿಕ ತುಂಬಿರುವ ವಾಣಿವಿಲಾಸ ಸಾಗರ ಜಲಾಶಯ ಮತ್ತು ಜಿಲ್ಲೆಯ ಸಮಸ್ಯೆಗಳ ಕುರಿತು ಚರ್ಚೆ, ಸಂವಾದಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.