ಕುಂದಾಪುರ: ಬೈಂದೂರು ತಾಲೂಕು ಒತ್ತಿನೆಣೆ ಸಮೀಪ ಹೇನಬೇರು ರಸ್ತೆಯಲ್ಲಿ ಕಾರು ಸಹಿತ ಕಾರ್ಕಳ ಮೂಲದ ಆನಂದ ದೇವಾಡಿಗ (62) ಎಂಬುವರನ್ನು ಸುಟ್ಟು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ಆ.1ರ ತನಕ ನ್ಯಾಯಾಂಗ ಬಂಧನ ವಿಧಿಸಿ ಕುಂದಾಪುರ ಜೆಎಂಎಫ್ಸಿ ನ್ಯಾಯಾಧೀಶ ಧನೇಶ್ ಮುಗಳಿ ಆದೇಶಿಸಿದ್ದಾರೆ. ಪ್ರಾಸಿಕ್ಯೂಶನ್ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ವರ್ಷಾಶ್ರೀ ವಾದಿಸಿದ್ದರು.
ಜು.12ರಂದು ತಡರಾತ್ರಿ ಹೇನಬೇರು ರಸ್ತೆ ಬಳಿ ಘಟನೆ ನಡೆದಿದ್ದು ಮರುದಿನ ಬೆಳಕಿಗೆ ಬಂದಿತ್ತು. ಜು.14ರಂದು ಬೆಳಗ್ಗೆ ಪ್ರಕರಣದ ಪ್ರಮುಖ ಆರೋಪಿಗಳಾದ ಕಾರ್ಕಳದ ಮಾಳ ನಿವಾಸಿ ಸದಾನಂದ ಶೇರಿಗಾರ್(52), ಹಿರ್ಗಾನ ಶಿವನಗರದ ಶಿಲ್ಪಾ ಸಾಲ್ಯಾನ್(30) ಹಾಗೂ ಇವರಿಗೆ ಪರಾರಿಯಾಗಲು ಸಹಕಾರ ನೀಡಿದ ಕಾರ್ಕಳ ಪಚ್ಚಲಾಡಿ ಸೂಡ ನಿವಾಸಿಗಳಾದ ಸತೀಶ್ ದೇವಾಡಿಗ (49), ನಿತಿನ್ ದೇವಾಡಿಗ (40) ಎಂಬುವರನ್ನು ಬಂಧಿಸಲಾಗಿತ್ತು.