More

    ಜೀಜಾಮಾತಾ ಸ್ವಾಭಿಮಾನದ ಪ್ರತೀಕ; ಪ್ರೊ.ಬಿ.ಕೆ. ತುಳಸಿಮಾಲ

    ವಿಜಯಪುರ: ಭಾರತದ ಇತಿಹಾಸದಲ್ಲಿ ಅಮರರಾಗಿ ಉಳಿದ ಜೀಜಾಮಾತಾ ಅವರು ಸ್ವಾಭಿಮಾನದ ಪ್ರತೀಕ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ. ತುಳಸಿಮಾಲ ಹೇಳಿದರು.

    ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ಬೆಂಗಳೂರು ಇವರ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಜೀಜಾವುಮಾಸಾಹೇಬ ಅವರ ಜೀವನ ಮತ್ತು ಆದರ್ಶಗಳ ಕುರಿತ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

    ಭಾರತದ ಚರಿತ್ರೆಯಲ್ಲಿ ಆಗಿ ಹೋದ ಅನೇಕ ವೀರ ಮಹಿಳೆಯರಲ್ಲಿ ಮರಾಠ ಸಂಸ್ಕೃತಿಯ ಜೀಜಾಮಾತಾ ಸ್ವಾಭಿಮಾನದ ಪ್ರತೀಕರಾಗಿದ್ದಾರೆ. ಇಂದಿನ ತಾಯಿಯಂದಿರು ಜೀಜಾಮಾತಾರ ವ್ಯಕ್ತಿತ್ವದಿಂದ ಪ್ರೇರಣೆಗೊಳ್ಳಬೇಕು. ಚರಿತ್ರೆಯು ನಮಗೆ ಅನೇಕ ಪಾಠಗಳನ್ನು ಕಲಿಸುತ್ತದೆ. ಆ ಪಾಠಗಳು ನಮ್ಮ ಸಮಾಜದ ವ್ಯಕ್ತಿತ್ವವನ್ನು ಸುಂದರಗೊಳಿಸುತ್ತವೆ. ಇಂತಹ ವೀರ ಮಹಿಳೆಯರ ಕುರಿತು ಅಧ್ಯಯನಗಳು, ಕಾರ್ಯಾಗಾರಗಳು, ಚಿಂತನಾಗೊಷ್ಠಿಗಳು ನಡೆಯಬೇಕೆಂದರು.

    ಮರಾಠ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಕಾಶ ಪಾಗೋಜಿ ಮಾತನಾಡಿ, ಅಭಿವೃದ್ಧಿ ನಿಗಮವು ಮರಾಠ ಸಮುದಾಯದ ಪ್ರಗತಿಗೆ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಅದರಲ್ಲಿ ವಿಚಾರ ಸಂಕಿರಣವು ಒಂದು ಎಂದು ಹೇಳಿದರು.

    ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಮಹಿಳಾ ಸಬಲೀಕರಣದ ಆರಂಭವು 17 ನೇ ಶತಮಾನದಲ್ಲಿ ಪ್ರಾರಂಭವಾಗಿದ್ದು, ಇತಿಹಾಸದಲ್ಲಿರುವ ಅನೇಕ ವೀರ ಮಹಿಳೆಯರು ನಮ್ಮ ಬದುಕಿಗೆ ಪ್ರೇರಣೆಯಾಗಿದ್ದಾರೆ. ಇಂದಿನ ಸಮಾಜವು ಗತಕಾಲದ ಇತಿಹಾಸದ ಆಧಾರದ ಮೇಲೆ ಹೊಸ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಎಂದರು.

    ತುಳಸಿರಾಮ ಸೂರ್ಯವಂಶಿ, ಭೀಮಾಶಂಕರ ಶಿವಳಕರ ಮರಾಠಾ ಸಂಸ್ಕೃತಿ ಕುರಿತು ವಿವರಿಸಿದರು. ರಾಹುಲ್ ಜಾಧವ, ವಿಜಯಕುಮಾರ ಚವಾಣ್, ಸಾಹಿತಿ ಡಾ. ವಿಠ್ಠಲರಾವ ಗಾಯಕವಾಡ, ಡಾ. ಪ್ರಕಾಶ ಖಾಡೆ, ಪ್ರೊ. ಮಹೇಶ ಚಿಂತಾಮಣಿ, ಅಶೋಕ ಆಸಂಗಿ, ಡಾ. ಎಂ.ಪಿ. ಬಳಿಗಾರ, ರಮೇಶ ಚವಾಣ ಮತ್ತಿತರರಿದ್ದರು.
    ಪ್ರೊ. ವಿಷ್ಣು ಶಿಂದೆ ಸ್ವಾಗತಿಸಿದರು. ಡಾ. ರೂಪಾ ನಿರೂಪಿಸಿದರು. ವೀಣಾ ಮುದೋಳ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts