ನವದೆಹಲಿ: ಕೆನರಾ ಬ್ಯಾಂಕ್ಗೆ ಸಂಬಂಧಿಸಿದ್ದು ಎನ್ನಲಾದ 538 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧನ ಮಾಡಿದೆ.
ಮುಂಬೈನ ಇಡಿ ಕಚೇರಿಯಲ್ಲಿ ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಅಕ್ರಮ ಹಣ ವರ್ಗಾವಣೆ ತಡೆಗಟ್ಟುವಿಕೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಗೋಯಲ್ ಅವರನ್ನು ಇಡಿ ಬಂಧಿಸಿದೆ. 74 ವರ್ಷದ ಗೋಯಲ್ ಅವರನ್ನು ಶನಿವಾರ ಮುಂಬೈನ ಪಿಎಂಎಲ್ಎ ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಇಡಿ ತಮ್ಮ ವಶಕ್ಕೆ ಪಡೆದುಕೊಳ್ಳಲಿದೆ.
ಕೆನರಾ ಬ್ಯಾಂಕ್ನಲ್ಲಿ 538 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಟ್ ಏರ್ವೇಸ್ ಸಂಸ್ಥಾಪಕ ಗೋಯಲ್ ಮತ್ತು ಅವರ ಪತ್ನಿ ಅನಿತಾ ಮತ್ತು ಕಂಪನಿಯ ಕೆಲವು ಮಾಜಿ ಅಧಿಕಾರಿಗಳ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಎಫ್ಐಆರ್ ದಾಖಲಿಸಿದ್ದು, ಇದರ ಆಧಾರದ ಮೇಲೆ ಇದೀಗ ಇಡಿ ವಿಚಾರಣೆ ನಡೆಸುತ್ತಿದೆ.
ಜೆಟ್ ಏರ್ವೇಸ್ (ಇಂಡಿಯಾ) ಲಿಮಿಟೆಡ್ಗೆ (ಜೆಐಎಲ್) 848.86 ಕೋಟಿ ಮೊತ್ತದ ಸಾಲವನ್ನು ಮಂಜೂರು ಮಾಡಲಾಗಿದ್ದು, ಅದರಲ್ಲಿ 538.62 ಕೋಟಿ ರೂ. ಬಾಕಿ ಇದೆ ಎಂದು ಆರೋಪಿಸಿ ಕೆನರಾ ಬ್ಯಾಂಕ್ನ ಆಡಳಿತ ಮಂಡಳಿ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಜಿಐಎಲ್ನ ವಿಧಿವಿಜ್ಞಾನ ಲೆಕ್ಕಪರಿಶೋಧನೆಯ ಪ್ರಕಾರ ಸಂಬಂಧಿತ ಕಂಪನಿಗಳಿಗೆ ಒಟ್ಟು ಕಮಿಷನ್ ವೆಚ್ಚದಲ್ಲಿ 1,410 ಕೋಟಿ ರೂ. ಅನ್ನು ಪಾವತಿಸಿರುವುದು ಕಂಡುಬಂದಿದ್ದು, ಹಣವನ್ನು ಅಕ್ರಮವಾಗಿ ಬೇರೆಡೆಗೆ ವರ್ಗಾಹಿಸಿರುವುದು ಪತ್ತೆಯಾಗಿದೆ ಎಂದು ಕೆನರಾ ಬ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿತ್ತು. ಜಿಐಎಲ್ ಕಂಪನಿ ತನ್ನ ಅಧೀನ ಕಂಪನಿಗಳಿಗೆ ಸಾಲದ ಹಣವನ್ನು ಸಾಲ ಮತ್ತು ಮುಂಗಡಗಳು ಮತ್ತು ವಿಸ್ತರಿಸಿದ ಹೂಡಿಕೆಗಳ ರೂಪದಲ್ಲಿ ಬೇರೆಡೆಗೆ ತಿರುಗಿಸಿದೆ ಎಂದು ತಿಳಿಬಂದಿದೆ. (ಏಜೆನ್ಸೀಸ್)