ಬೆಂಗಳೂರುಳ: ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ದೊಡ್ಡಮಟ್ಟದಲ್ಲಿ ಜನ ಬೆಂಬಲ ಪಡೆಯುವಲ್ಲಿ ವಿಫಲವಾದರೂ ಆಗಿಂದಾಗ್ಗೆ ಬಿಜೆಪಿ, ಕಾಂಗ್ರೆಸ್ ಎರಡಕ್ಕೂ ಅನಿವಾರ್ಯವಾಗುತ್ತಲೇ ಇದೆ. ಇದೀಗ ವಿಧಾನಪರಿಷತ್ ವಿಚಾರದಲ್ಲೂ ಜೆಡಿಎಸ್ಗೆ ಮನ್ನಣೆ ಸಿಗಲಿದೆ!
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾದಾಗ ಕಾಂಗ್ರೆಸ್ ವಿಧಾನಪರಿಷತ್ನ ಸಭಾಪತಿ ಸ್ಥಾನ ಪಡೆದು, ಉಪಸಭಾಪತಿ ಸ್ಥಾನ ಜೆಡಿಎಸ್ಗೆ ಬಿಟ್ಟುಕೊಟ್ಟಿತು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ವಿಧಾನಸಭೆಯಲ್ಲಿ ಬಹುಮತ ಪಡೆದು ಸರ್ಕಾರ ರಚಿಸಿತು. ಸ್ಪೀಕರ್ ಕೂಡ ಬದಲಾದರು. ಆದರೆ, ಪರಿಷತ್ನಲ್ಲಿ ಬಿಜೆಪಿ ಬಹುಮತವಿಲ್ಲ. ಇದೀಗ ವಿಧಾನಸಭೆಯಿಂದ ಪರಿಷತ್ಗೆ ನಡೆದಿರುವ ಚುನಾವಣೆಯಲ್ಲಿ ಬಿಜೆಪಿ ಬಲ ಹೆಚ್ಚಿಸಿಕೊಂಡಿದೆ. ಅಷ್ಟಾದರೂ ಬಹುಮತಕ್ಕೆ ಸಾಕಾಗುವಷ್ಟು ಸದಸ್ಯರನ್ನು ಹೊಂದಿಲ್ಲ.
ಈ ನಡುವೆ ಎರಡು ಪ್ರಮುಖ ಕಾರಣಕ್ಕೆ ಪರಿಷತ್ನಲ್ಲಿ ಬಿಜೆಪಿ ಸಭಾಪತಿ ಸ್ಥಾನ ತನ್ನದಾಗಿಸಿಕೊಳ್ಳುವ ಅನಿವಾರ್ಯತೆ ಇದೆ. ಕರೊನಾ ಲಾಕ್ಡೌನ್ ಸಂದರ್ಭದಲ್ಲಿ ಹಲವು ಸುಗ್ರಿವಾಜ್ಞೆ ತಂದಿದೆ, ಅದು ಕಾನೂನು ರೂಪ ಪಡೆದುಕೊಳ್ಳಬೇಕೆಂದರೆ ಪರಿಷತ್ನಲ್ಲೂ ಚರ್ಚೆಯಾಗಬೇಕು, ಅನುಮತಿ ಪಡೆದುಕೊಳ್ಳಬೇಕು. ಒಂದೊಮ್ಮೆ ವಿಧಾನಸಭೆಯಿಂದ ಕಳಿಸಿದ ವಿಧೇಯಕವನ್ನು ಪರಿಷತ್ನಲ್ಲಿ ತಿರಸ್ಕರಿಸದೇ ಸಮಿತಿಗಳಿಗೆ ನೀಡಿದರೆ ವಿಧೇಯಕಗಳು ಜಾರಿಯಾಗದೆ ಅತಂತ್ರಸ್ಥಿತಿಯಲ್ಲಿ ಒಂದಷ್ಟು ದಿನ ಉಳಿಯುತ್ತದೆ. ಈ ಕಾರಣಕ್ಕೆ ಪರಿಷತ್ನಲ್ಲಿ ಜೆಡಿಎಸ್ ಬೆಂಬಲ ಪಡೆದು ಸಭಾಪತಿ ಸ್ಥಾನ ತನ್ನಾದಾಗಿಸಿಕೊಳ್ಳಬೇಕಾಗುತ್ತದೆ. ಜತೆಗೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಒಂದಷ್ಟು ಪೈಪೋಟಿ ಸಹಜ. ಸಭಾಪತಿ ಸ್ಥಾನವನ್ನು ತನ್ನದಾಗಿಸಿಕೊಂಡರೆ ಪರಿಷತ್ನಿಂದ ಆಯ್ಕೆಯಾಗಿ ಸಚಿವರಾಗಿರುವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಸಭಾಪತಿ ಸ್ಥಾನದಲ್ಲಿ ಕೂರಿಸಿದರೆ ಒಂದು ಹೆಚ್ಚುವರಿ ಮಂತ್ರಿ ಸ್ಥಾನ ತುಂಬಿಕೊಳ್ಳಲು ಅವಕಾಶವಿದೆ ಎಂಬ ಚರ್ಚೆ ಬಿಜೆಪಿಯಲ್ಲಿ ಇದೆ. ಇದಿನ್ನೂ ಪ್ರಾಥಮಿಕ ಹಂತದ ಚರ್ಚೆಯಷ್ಟೇ.
ಬಲಾಬಲವೇನು?
75 ಸದಸ್ಯ ಬಲದ ಮೇಲ್ಮನೆಯಲ್ಲಿ ಇತ್ತೀಚೆಗೆ ಮುಗಿದ ಪರಿಷತ್ ಚುನಾವಣೆ ಬಳಿಕ ಬಿಜೆಪಿ ಬಲ 23ಕ್ಕೇರಿದೆ. ಕಾಂಗ್ರೆಸ್ 29 ಸ್ಥಾನ ಹೊಂದಿದ್ದರೆ, ಜೆಡಿಎಸ್ 14 ಸ್ಥಾನ ಹೊಂದಿದೆ. 9 ಸ್ಥಾನ ಖಾಲಿ ಇದ್ದು, ಐದು ನಾಮ ನಿರ್ದೇಶನ ಸ್ಥಾನ ಬಿಜೆಪಿ ಪಾಲಿಗೆ ವರ. ಹೊಸ ಆಯ್ಕೆ ನಡೆದ ಕೂಡಲೆ ಬಿಜೆಪಿ ಬಲ 28ಕ್ಕೇರಿಕೆಯಾಗಲಿದೆ. ಎರಡು ಪದವೀಧರ, ಎರಡು ಶಿಕ್ಷಕರ ಕ್ಷೇತ್ರದ ಚುನಾವಣೆ ಯಾವಾಗ ನಡೆಯುತ್ತದೆಂಬ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಜೆಡಿಎಸ್-ಕಾಂಗ್ರೆಸ್ನ ಪರಿಷತ್ ಮೈತ್ರಿ ಸದ್ಯಕ್ಕೆ ಅಬಾಧಿತ. ಒಂದು ವೇಳೆ ಬಿಜೆಪಿಯೇ ಪೂರ್ಣ ಬಹುಮತ ಪಡೆದುಕೊಳ್ಳುವವರೆಗೆ ಕಾಯಬೇಕೆಂದರೆ 2022ರ ಜನವರಿಯಲ್ಲಿ ಸ್ಥಳೀಯ ಸಂಸ್ಥೆಯಿಂದ ಪರಿಷತ್ನ 25 ಸ್ಥಾನಗಳಿಗೆ ನಡೆವ ಚುನಾವಣೆವರೆಗೆ ಕಾಯಬೇಕು. ಈ 25ರಲ್ಲಿ ಹಾಲಿ ಕಾಂಗ್ರೆಸ್ 14, ಬಿಜೆಪಿ 6, ಜೆಡಿಎಸ್ 4 ಮತ್ತು ಒಬ್ಬ ಪಕ್ಷೇತರ ಆರಿಸಿಬಂದಿದ್ದಾರೆ.
ಜೆಡಿಎಸ್ ಅನಿವಾರ್ಯ
ಇದೀಗ ಜೆಡಿಎಸ್ ಆಟ ಆರಂಭವಾಗಲಿದೆ. ಪರಿಷತ್ಗೆ ಸೀಮಿತವಾದ ಕಾಂಗ್ರೆಸ್ ಜತೆಗಿನ ಮೈತ್ರಿಯಿಂದ ಜೆಡಿಎಸ್ಗೆ ಉಪಸಭಾಪತಿ ಸ್ಥಾನ ಸಿಕ್ಕಿದೆ. ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೂ ಅದೇ ಸ್ಥಾನ. ಅದಕ್ಕಿಂತ ಹೆಚ್ಚಿನದೇನು ಸಿಗದು. ಆದರೆ, ಜೆಡಿಎಸ್ ಬಗ್ಗೆ ಕಾಂಗ್ರೆಸ್ ಪ್ರತಿಜ್ಞಾ ಸಮಾರಂಭದಲ್ಲಿ ಇನ್ನೆಂದಿಗೂ ಮೈತ್ರಿ ಬೇಡ, ಲೋಕಸಭೆ ಚುನಾವಣೆಯಲ್ಲಿ ಮೈತ್ರಿಯಿಂದಲೇ ಸೋತೆವು ಎಂಬ ಕಾಂಗ್ರೆಸಿಗರ ಮಾತು ಜೆಡಿಎಸ್ ನಾಯಕರಿಗೆ ಬೇಸರ ತರಿಸಿದೆ. ಈ ಮಾತಿನ ಅಡ್ಡ ಪರಿಣಾಮವಾದರೆ ಸಭಾಪತಿ ಬಿಜೆಪಿಗೆ ಸುಲಭ ತುತ್ತು ಎಂಬ ಮಾತು ಕೇಳಿಬರುತ್ತಿದೆ.
ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಿರುವ ದಿನೇಶ್ ಗುಂಡೂರಾವ್ ಸರಿ-ತಪ್ಪುಗಳ ಪರಾಮರ್ಶೆಗಾಗಿ ಸಾರ್ವಜನಿಕ ಚರ್ಚೆಗೆ ಬರಲಿ. ವಿಧಾನ ಪರಿಷತ್ ಚುನಾವಣೆಗೆ ಬೆಂಬಲ ನೀಡುತ್ತೇವೆ. ಅಭ್ಯರ್ಥಿಯನ್ನು ಘೊಷಿಸಿ ಎಂದರೂ ಸುಮ್ಮನಾದ ನೀವು ಯಾವ ರೀತಿಯ ಪಕ್ಷ ನಿಷ್ಠರು?
| ಎಚ್.ಡಿ. ರೇವಣ್ಣ ಮಾಜಿ ಸಚಿವ
ಮನೆಗೆ ಬರುತ್ತೇ ಫೈವ್ ಸ್ಟಾರ್ ಹೋಟೆಲ್ ಊಟ; ಬಟ್ಟೆನೂ ತೊಳೆದು ಕೊಡ್ತಾರೆ…!