ಶಿವಮೊಗ್ಗ: ಜಯಂತಿಗಳಂದು ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ ನೀಡುವ ಸಂಪ್ರದಾಯವನ್ನು ಸರ್ಕಾರ ಕೈಬಿಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಆಗ್ರಹಿಸಿದರು.
ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಸಹಯೋಗದಲ್ಲಿ 7ನೇ ಅಂತಾರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮತ್ತು ಧನ್ವಂತರಿ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಜಯಂತಿಗಳು ಕಾಟಾಚಾರಕ್ಕೆ ಸೀಮಿತವಾಗುತ್ತಿವೆ. ಸರ್ಕಾರದಿಂದಲೇ ಬಸವೇಶ್ವರ, ಕೆಂಪೇಗೌಡ ಸೇರಿದಂತೆ 40ಕ್ಕೂ ಅಧಿಕ ಜಯಂತಿಗಳನ್ನು ಒತ್ತಾಯಪೂರ್ವಕವಾಗಿ ಆಚರಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಯಂತಿಗಳು ಆಯಾ ಸಮಾಜಕ್ಕೆ ಸೀಮಿತವಾಗಿವೆ. ಮುಖ್ಯವಾಗಿ ಜಯಂತಿಗಳಂದು ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ ನೀಡುವ ಸಂಪ್ರದಾಯವನ್ನು ಸರ್ಕಾರ ಕೈಬಿಡಬೇಕು. ಈ ಬಗ್ಗೆ ವಿಧಾನ ಪರಿಷತ್ನಲ್ಲೂ ಧ್ವನಿ ಎತ್ತುತ್ತೇನೆ ಎಂದರು.
ಜಯಂತಿಗಳು ಕೇವಲ ಒಂದು ಸಮುದಾಯ, ಜಾತಿಗಳಿಗೆ ಸೀಮಿತವಾಗಬಾರದು. ಆದರೆ ಬಹುತೇಕ ಎಲ್ಲ ಜಯಂತಿಗಳನ್ನು ನಾಮಕಾವಸ್ತೆಗೆ ಆಚರಿಸಲಾಗುತ್ತಿದೆ. ಜಯಂತಿಗಳಂದು ರಜೆ ನೀಡುವ ಬದಲು ಒಂದು ಗಂಟೆ ಹೆಚ್ಚಿಗೆ ಕೆಲಸ ಮಾಡಬೇಕು. ಶಾಲಾ-ಕಾಲೇಜುಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸಗಳನ್ನು ಮಾಡಿಸಬೇಕು. ಮಹಾನ್ ವ್ಯಕ್ತಿಗಳ ಸಾಧನೆ, ಇತಿಹಾಸ, ಹೋರಾಟದ ಬಗ್ಗೆ ಅರಿವು ಮೂಡಿಸಬೇಕು. ಆಗ ಮಾತ್ರ ಜಯಂತಿಗಳಿಗೆ ಅರ್ಥಬರುತ್ತದೆ ಎಂದರು.