ಕರ್ನಾಟಕ ಲೋಕಸೇವಾ ಆಯೋಗ ಇತ್ತೀಚಿನ ದಿನಗಳಲ್ಲಿ ಭ್ರಷ್ಟರಕೂಪವಾಗಿ ಮಾರ್ಪಡುತ್ತಿದೆ. ಆಯೋಗವು ಹಣದಾಹ, ರಾಜಕಾರಣಿಗಳ ಪ್ರಭಾವದಿಂದ ತನ್ನ ವರ್ಚಸ್ಸನ್ನು ಕಳೆದುಕೊಂಡಿದೆ. ಅದು ಇತ್ತೀಚಿನ ವರ್ಷಗಳಲ್ಲಿ ನಡೆಸಿದ ಎಲ್ಲ ನೇಮಕಾತಿಗಳಲ್ಲಿಯೂ ಅಪಸ್ವರ ಕೇಳಿಬಂದಿದೆ. ಅಲ್ಲದೆ, ಯಾವುದೇ ಒಂದು ನೇಮಕಾತಿ ಪೂರ್ಣಗೊಳಿಸಲು 4 ರಿಂದ 5 ವರ್ಷಗಳನ್ನು ಆಯೋಗ ತೆಗೆದುಕೊಳ್ಳುತ್ತದೆ. ಈ ರೀತಿ ನೇಮಕಾತಿ ಪ್ರಕ್ರಿಯೆ ದೀರ್ಘವಾದಂತೆಲ್ಲ ಅಕ್ರಮ ಎಸಗಲು ಅನುವು ಮಾಡಿಕೊಟ್ಟಂತಾಗುತ್ತದೆ ಎಂಬುದನ್ನು ಗಮನಿಸಬೇಕು. ಪ್ರಶ್ನೆಪತ್ರಿಕೆ ಸೋರಿಕೆ, ಉತ್ತರ ಕೀಗಳ ಸೋರಿಕೆ ಹಾಗೂ ನೇಮಕಾತಿಯಲ್ಲಿ ವಿಳಂಬದಂಥ ಅಪಸವ್ಯಗಳನ್ನು ತಡೆಯಲೇ ಬೇಕು.
ಸರ್ಕಾರವು ಆಯೋಗದ ತಪ್ಪುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಪರಿಸ್ಥಿತಿ ಸುಧಾರಿಸದಿದ್ದಲ್ಲಿ ಕೆಪಿಎಸ್ಸಿಯನ್ನು ರದ್ದುಮಾಡಿ ಆ ಸ್ಥಾನದಲ್ಲಿ ಕೇಂದ್ರದ ಯುಪಿಎಸ್ಸಿ ಹಾಗೂ ಎಸ್ಎಸ್ಸಿಗಳಂತೆ ನಿಷ್ಪಕ್ಷಪಾತ ಹಾಗೂ ಭ್ರಷ್ಟಾಚಾರರಹಿತ ಆಯೋಗವನ್ನು ಸ್ಥಾಪಿಸುವ ಅಗತ್ಯವಿದೆ. ಸರ್ಕಾರಿ ಸಿಬ್ಬಂದಿ/ಅಧಿಕಾರಿಗಳಾಗಿ ಸೇವೆ ಸಲ್ಲಿಸಬೇಕೆಂದು ಆಸೆಗಣ್ಣಿನಿಂದ ಕಾಯುತ್ತಿರುವ ಸಾವಿರಾರು ಯುವಕರ ಮನಸ್ಸಿನಲ್ಲಿನ ನೇಮಕಾತಿಗಳ ಬಗೆಗಿನ ಸಂಶಯವನ್ನು ದೂರ ಮಾಡಬೇಕಿದೆ. ಪಾರದರ್ಶಕತೆ ತರಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ.
| ಸಿದ್ದನಗೌಡ ಮರಕಮದಿನಿ