ಚಿತ್ರದುರ್ಗ: ರಾಜ್ಯಾದ್ಯಂತ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ನಡೆಸುತ್ತಿರುವ ‘ಜನ ಚೈತನ್ಯಯಾತ್ರೆ’ ಶುಕ್ರವಾರ ಚಳ್ಳಕೆರೆಯಿಂದ ಮರು ಆರಂಭವಾಗಲಿದೆ ಎಂದು ಕೆಆರ್ಎಸ್ ಪಕ್ಷದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಹೇಶ ಸಿ.ನಗರಂಗೆರೆ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1980ರ ಜುಲೈ 21ರಂದು ನರಗುಂದ ಮತ್ತು ನವಲಗುಂದದಲ್ಲಿ ನಡೆದ ಗಲಭೆ, ಹೋರಾಟ, ಹಿಂಸಾಚಾರಕ್ಕೆ ಪೊಲೀಸರು ಸೇರಿ ಹಲವು ರೈತರು ಬಲಿಯಾದರು. ಈ ಹಿನ್ನೆಲೆ ಪ್ರತಿ ವರ್ಷ ಜು.21 ರಂದು ರಾಜ್ಯದಲ್ಲಿ ರೈತ ಹುತಾತ್ಮ ದಿನ ಆಚರಿಸಲಾಗುತ್ತಿದೆ. ಈ ವರ್ಷದ ಆಚರಣೆಯಲ್ಲಿ ಕೆಆರ್ಎಸ್ ಪಕ್ಷ ಪಾಲ್ಗೊಳ್ಳಲಿದೆ ಎಂದರು.
ಕೆಆರ್ಎಸ್ ರೈತ ಘಟಕದ ಅಧ್ಯಕ್ಷ ಜೋಗನಹಳ್ಳಿ ಗುರುಮೂರ್ತಿ ನೇತೃತ್ವದಲ್ಲಿ ನರಗುಂದ ಮತ್ತು ನವಲಗುಂದದಲ್ಲಿ ಕಾರ್ಯಕ್ರಮ ಆಯೋಜಿಸಿದೆ ಎಂದು ತಿಳಿಸಿದರು.
ಎಲ್ಲಿ-ಯಾವಾಗ ಯಾತ್ರೆ:
ಜು.15 ರಂದು ಚಳ್ಳಕೆರೆಯಿಂದ ಆರಂಭಗೊಳ್ಳುವ ಕರ್ನಾಟಕ ಜನ ಚೈತನ್ಯಯಾತ್ರೆ 16 ದಿನಗಳ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಸಾಗಲಿದೆ. ಜು.16 ಕ್ಕೆ ದಾವಣಗೆರೆ, 17, 18ರಂದು ಹಾವೇರಿ, 19ರಂದು ಧಾರವಾಡ, 20ಕ್ಕೆ ಬೆಳಗಾವಿ, 21ರ ರೈತ ಹುತಾತ್ಮ ದಿನಾಚರಣೆಯಂದು ನರಗುಂದ-ನವಲಗುಂದದಲ್ಲಿ ನಡೆಯಲಿದೆ.
ಜು.22 ರಂದು ಬಾಗಲಕೋಟೆ, 23, 24ರಂದು ವಿಜಯಪುರ, ಬೀದರ್, 25 ರಂದು ಕಲಬುರಗಿ, ಯಾದಗಿರಿ, 26, 27ಕ್ಕೆ ರಾಯಚೂರು, ಕೊಪ್ಪಳ, 28, 29, 30ರಂದು ವಿಜಯನಗರ, ಬಳ್ಳಾರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಚಳ್ಳಕೆರೆ ತಾಲೂಕು ರೈತ ಸಂಘದ ಅಧ್ಯಕ್ಷ ನಾಗಿರೆಡ್ಡಿ ಇದ್ದರು.